ಮಸ್ಕಿ (ರಾಯಚೂರು ಜಿಲ್ಲೆ): ಗಚ್ಚಿನಮಠದ ವಾಣಿಜ್ಯ ಮಳಿಗೆಯಲ್ಲಿನ ಪೇಂಟ್ ಅಂಗಡಿಯ ಎರಡು ಮಳಿಗೆಗಳಿಗೆ ಬೆಂಕಿ ತಗುಲಿ ಭಸ್ಮವಾಗಿವೆ. ಪಕ್ಕದ ಮೊಬೈಲ್ ಅಂಗಡಿ ಭಾಗಶಃ ಸುಟ್ಟಿದೆ. ಪೇಂಟ್ ಅಂಗಡಿಯಲ್ಲಿನ ₹ 50 ಲಕ್ಷ ಮೌಲ್ಯದ ಪೇಂಟ್ ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಹೋಗಿವೆ.
ಪೇಂಟ್ ಅಂಗಡಿ ಚೆನ್ನಬಸನಗೌಡ ಪಾಟೀಲ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.
ರಾತ್ರಿ ಅಂಗಡಿಯಲ್ಲಿ ಬೆಂಕಿ ಕಾಣಸಿಕೊಂಡ ಕೂಡಲೇ ಸ್ಥಳೀಯರು ಲಿಂಗಸುಗೂರಿನ ಆಗ್ನಿ ಶಾಮಕ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ. 25 ಕಿಮೀ ದೂರದಿಂದ ಆಗ್ನಿ ಶಾಮಕ ವಾಹನ ಬರುವುದು ತಡವಾದ ಕಾರಣ, ಅಲ್ಲಿ ನೆರದಿದ್ದ ನೂರಾರು ಜನರೇ ಬೆಂಕಿ ಆರಿಸಲು ಪ್ರಯತ್ನಿಸಿದರು.
ಬೆಂಕಿ ಎರಡು ಮಳಿಗೆಯನ್ನು ಸುಟ್ಟು ಮೂರನೇ ಮಳಿಗೆಗೆ ಹತ್ತಿಕೊಂಡಿದೆ. ಸಿಂಧನೂರು ಹಾಗೂ ಲಿಂಗಸುಗೂರಿನಿಂದ 45 ನಿಮಿಷ ತಡವಾಗಿ ಬಂದ ಆಗ್ನಿಶಾಮಕ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಪ್ರಯತ್ನ ಪಟ್ಟು ಬೆಂಕಿ ನಂದಿಸಿದ್ದಾರೆ. ಮಳಿಗೆಯ ಬಾಗಿಲುಗಳನ್ನು ಜೆಸಿಬಿ ಸಹಾಯದಿಂದ ಒಡೆದು ಬೆಂಕಿ ಆರಿಸಲು ಪ್ರಯತ್ನಿಸಲಾಯಿತು. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.