ರಾಯಚೂರು: ಫಸಲ್ ಭೀಮಾ ಯೋಜನೆಯ ಬೆಳೆ ಪರಿಹಾರ ನೀಡುವುದು, ಸಮರ್ಪಕ ವಿದ್ಯುತ್ ಸರಬರಾಜು ಸೇರಿದಂತೆ ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಆ ನಂತರ ಜಿಲ್ಲಾಡಳಿತ ಕಚೇರಿಗೆ ಮನವಿ ಸಲ್ಲಿಸಿ, ಕೋವಿಡ್ನಿಂದ ರೈತರು ಆತಂಕದಲ್ಲಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರಿವಾಜ್ಞೆ ಮೂಲಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ರೈತರ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ಫಸಲ್ ಭೀಮಾ ಭೀಮಾ ಯೋಜನೆಯಡಿ ಪ್ರೀಮಿಯಂ ಹಣ ತುಂಬಿದ ಎಲ್ಲಾ ರೈತರಿಗೆ ಪರಿಹಾರದ ಹಣ ಜಮಾ ಮಾಡಬೇಕು. ಜಿಲ್ಲೆಯ ವಿದ್ಯುತ್ ವಿತರಣೆ ಹದಗೆಟ್ಟಿದ್ದು ಕೂಡಲೇ ಸರ್ಕಾರ ನಿಗದಿತ ಕೃಷಿ ಪಂಪ್ಸೆಟ್ಗಳಿಗೆ 7 ತಾಸು ಬದಲಿಗೆ 10 ತಾಸು ವಿದ್ಯುತ್ ಪೂರೈಸಬೇಕು. ಮುಂಗಾರು ಬೆಲೆಗಳಾದ ಸಜ್ಜೆ ಹಾಗೂ ಇನ್ನಿತರೆ ಬೆಳೆಗಳು ಕಟಾವಿಗೆ ಬಂದಿದ್ದು ಮುಕ್ತ ಮಾರುಕಟ್ಟೆಯಲ್ಲಿ ದರ ಕುಸಿದಿದ್ದು ಕೂಡಲೇ ಬೆಂಬಲ ಬೆಲೆಗೆ ಖರೀದಿಸಲು ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.
ಈಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವು ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸಬೇಕು. ನಾರಾಯಣಪುರ ಬಲದಂಡೆ ನಾಲೆಯ 9 ಎ ಕಾಲುವೆ ನಿರ್ಮಾಣಕ್ಕೆ ಕುರಕುಂದಿ ಮತ್ತು ಇತರೆ ಗ್ರಾಮಗಳ ರೈತರ ಬೂಮಿ ಸ್ವಾಧೀನಪಡಿಸಿಕೊಂಡಿದ್ದು ಕೂಡಲೇ ಅದರ ಪರಿಹಾರ ಹಣ ನೀಡಬೇಕು. ಹಟ್ಟಿ ಗ್ರಾಮಕ್ಕೆ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು. ಮಾನ್ವಿ, ಸಿರವಾರ ತಾಲ್ಲೂಕು ವ್ಯಾಪ್ತಿಯ ಎಡದಂಡೆ ನಾಲೆಯ ಉಪ ಕಾಲುವೆಯ ಕೊನೆ ಭಾಗದವರೆಗೆ ಸಮರ್ಪಕ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ದೊಡ್ಡ ಬಸನಗೌಡ ಬಲ್ಲಟಗಿ, ಅಮರಣ್ಣ ಗುಡಿಹಾಳ, ಯಂಕಪ್ಪ ಕಾರಬಾರಿ, ಸೂಗುರಯ್ಯ ಆರ್ ಎಸ್ ಮಠ, ವೀರೇಶ ಕಂಬಳಿ, ಕುಪ್ಪಣ್ಣ, ನರಸಪ್ಪ, ಮಲ್ಲನಗೌಡ ದದ್ಗಿ ಇದ್ದರು.