ರಾಯಚೂರು: ನಗರದಮಟ್ರಿಕ್ ನಂತರದ ಬಾಲಕಿಯರ ಪರಿಶಿಷ್ಟ ವರ್ಗಗಳ ವಸತಿ ನಿಲಯದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿದ್ಯಾರ್ಥಿಯನಿಯರಿಗೆ ಉಚಿತವಾಗಿ ವಸ್ತ್ರ ವಿತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಮುಖ್ಯ ಅತಿಥಿ ನಿವೃತ್ತ ವಾಯುಸೈನಿಕ ವಿಜಯಾನಂದ ರಾಗಲಪರ್ವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿ ಜೀವನ ಯಶಸ್ವಿಯಾಗಬೇಕಾದರೆ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಈ ಮೂರು ಸೂತ್ರಗಳನ್ನು ಅಳವಡಿಸಿಕೊಂಡಿರಾದರೆ ವಿದ್ಯಾರ್ಥಿ ಜೀವನ ಸುಗಮವಾಗಿ ಯಶಸ್ವಿ ಕಾಣಲು ಸಾಧ್ಯವಾಗುತ್ತದೆ’ ಎಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಸವರಾಜ ಕಳಸ ಮಾತನಾಡಿ, ‘ಆಲೋಚನೆಗಳು ಹಾಗೂ ದೂರ ದೃಷ್ಟಿ ವಿಶಾಲವಾಗಿರಬೇಕು. ಶಿಸ್ತು ಜೀವನದ ಅಡಿಪಾಯ ಅದರಿಂದ ಜೀವನ ಗುರುತಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಯಾವುದೇ ಕಾರಣಕ್ಕೂ ಕೀಳರಿಮೆ ಇರಬಾರದು. ಅದರಿಂದ ಮಾನಸಿಕ ಸ್ವಸ್ಥ ಕಳೆದುಕೊಳ್ಳುತ್ತೀರಿ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದಬಿಸಿಎಂ ಅಧಿಕಾರಿ ರಾಜೇಂದ್ರ ಜಲ್ದಾರ್ ಮಾತನಾಡಿ, ‘ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎನ್ನುವ ನನ್ನ ಆಸೆ. ಅದಕ್ಕೆ ಪೂರಕವಾಗಿ ನಾವು ಎಲ್ಲ ರೀತಿಯಲ್ಲಿ ಅವರಿಗೆ ವೇದಿಕೆ ಕಲ್ಪಿಸಿ ಕೊಡುತಿದ್ದೇವೆ’ ಎಂದು ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಮಂಡಳಿ ಸದಸ್ಯರಾದ ರಮೇಶ್ ಜೈನ್, ಜಟ್ರಮ್ ಗೋವಿಂದ ಹಾಗೂ ಯೋಗ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಹಾಗೂ ವಸತಿ ನಿಲಯದ ಮೇಲ್ವಿಚಾರಕಿ ಮಂಜುಳಾ ಇದ್ದರು.