ತುರ್ವಿಹಾಳ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ವಲಯದ ಕಾರ್ಮಿಕರ ಹಿತ ಕಾಯುವ ಕಾನೂನು ಜಾರಿಗೆ ತರಬೇಕು’ ಎಂದು ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅನ್ವರ್ ಪಾಷಾ ಹೇಳಿದರು.
ಇಲ್ಲಿನ ಕಾರ್ಮಿಕ ಭನದ ಎದುರು ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಬುಧವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,‘ಕಾನೂನು ಗಳಿಂದ ರೈತರಿಗೆ ಅನುಕೂಲವಾಗಬೇಕು’ ಎಂದರು.
ಕಾರ್ಮಿಕ ಮುಖಂಡ ಬಸವಂತಗೌಡ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಕಾರ್ಮಿಕರ ಪರಿಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯ. ಆದರೆ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ದೊರೆತಿಲ್ಲ ಎಂದು ದೂರಿದರು.
ಜನವಾದಿ ಮಹಿಳಾ ಸಂಘದ ಶಕುಂತಲಾ ಪಾಟೀಲ ಮಾತನಾಡಿ,‘ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಜೊತೆಗೆ ಜಾಗೃತರಾಗಿ ಸಂಘಟಿತ ಹೋರಾಟದ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದರು.
ಮುಖಂಡರಾದ ನಾಗಲಿಂಗ ಚಲವಾದಿ, ಹೊನ್ನುರಪ್ಪ ಕುಂಬಾರ, ಮುನಿಸ್ವಾಮಿ ಕಟ್ಟಿಮನಿ, ವೆಂಕಟೇಶ ಮಾಕಾಪುರ, ಶೇಖರಪ್ಪ ಕುಂಬಾರ, ಹನುಮಂತ ನಾಗಲಾಪುರ, ನಿರುಪಾದಿ ದಾಸರ, ರಾಮಣ್ಣ ನಂದವಾಡಗಿ ಹಾಗೂ ಇತರ ಕಾರ್ಮಿಕರು ಭಾಗವಹಿಸಿದ್ದರು.