ಕವಿತಾಳ: ರಾಜ್ಯದಲ್ಲಿ ಅತಿ ಹೆಚ್ಚು ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯಾಗುತ್ತಿರುವುದು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಎಂದು ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಆನಂದ ಕಳವಳ ವ್ಯಕ್ತಪಡಿಸಿದರು.
ಇರಕಲ್ ಮಠದಲ್ಲಿ ಜಾತ್ರೆ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ’ಸಾವಯವ ಕೃಷಿಯ ಅಗತ್ಯ ಮತ್ತು ಅನಿವಾರ್ಯತೆʼ ಕುರಿತು ಮಾತನಾಡಿದ ಅವರು ’ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಸಿಂಧನೂರು ತಾಲ್ಲೂಕಿನಲ್ಲಿ ಅಧಿಕ ರಸಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆಯಾಗುತ್ತಿದ್ದು ಪ್ರತಿ ವರ್ಷ ಅಂದಾಜು 44 ಲಕ್ಷ ಲೀಟರ್ ವಿಷವನ್ನು ಭೂಮಿಗೆ ಹಾಕಲಾಗುತ್ತಿದೆ ಎಂದರು.
ದೇಶಕ್ಕೆ ಸೋನಾ ಮಸೂರಿ ಅಕ್ಕಿ ಪೂರೈಸುವ ಸಿಂಧನೂರಿನಲ್ಲಿ ಔಷಧ ಅಂಗಡಿಗಳೂ ಅಧಿಕ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ನಿಯಂತ್ರಣಕ್ಕೆ ಪೊಲೀಸ್ ಬಂದೋಬಸ್ತ್ ಪಡೆಯುವ ಹಂತಕ್ಕೆ ತಲುಪಿದೆ ಎನ್ನುವುದು ಆತಂಕಕ್ಕಾರಿ ಸಂಗತಿʼ ಎಂದರು.
ಬಸವಪ್ರಸಾದ ಸ್ವಾಮಿ, ಮಹಾಂತ ಸ್ವಾಮಿ, ಡಾ.ಶಾಂತವೀರ ಸ್ವಾಮಿ, ಜಯ ಬಸವಕುಮಾರಸ್ವಾಮಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿ, ಮಹಾಲಿಂಗ ಸ್ವಾಮಿ, ಇಮ್ಮಡಿ ಕೇತೇಶ್ವರ ಸ್ವಾಮಿ ಉಪಸ್ಥಿತರಿದ್ದರು.