ರಾಯಚೂರು: ದೇಶದಲ್ಲಿ ಹಿಂದೂ ಸಂಘಟನೆಯನ್ನು ಸುಭದ್ರವಾಗಿ ಕಟ್ಟೋಣ. ಹಿಂದೂ ಧರ್ಮದ ಸಂಘಟನೆ ಮೇಲೆ ಸುಬುಧೇಂದ್ರ ತೀರ್ಥರ ಆಶೀರ್ವಾದ ಸದಾ ಇರಲಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯ ಗುರು ಸಾರ್ವಭೌಮ ಸಂಸ್ಕೃತಿ ವಿದ್ಯಾಪೀಠವು ಆಯೋಜಿಸಿರುವ ಮೂರು ದಿನಗಳ ಹರಿದಾಸ ಸಾಹಿತ್ಯ ಮತ್ತು ಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಹಿಂದೂ ಸಂಘಟನೆಯನ್ನು ಬಲಿಷ್ಠಗೊಳಿಸಲು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಶ್ರೀ ಸುಬುಧೇಂದ್ರ ತೀರ್ಥರು, ದೇಶದ ಮೂಲೆ ಮೂಲೆಯಿಂದ ವಿವಿಧ ಮಠಗಳ ಮಠಾಧೀಶರನ್ನು ಆಹ್ವಾನಿಸಿ ಸನಾತನ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಚರ್ಚಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಠ ಮಂದಿರಗಳು ಹಿಂದೂತ್ವ ಕಟ್ಟುವ ಕಾರ್ಯ ಮಾಡುತ್ತಿವೆ. ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುವ ಶಕ್ತಿ ಭಗವಂತ ನಮಗೆ ಕರುಣಿಸಲಿ. ಈಡೀ ದೇಶದಲ್ಲಿ ಭಾರತೀಯ ಜನತಾ ಪಕ್ಷ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ದಾಂತಗಳ ಪಾಂಡಿತ್ಯ ಹಾಗೂಪಾಣಿ ವ್ಯಾಕರಣದ ಬಗ್ಗೆ ಎರಡು ಗುಂಪುಗಳ ಮಧ್ಯೆ ಚರ್ಚೆ ನಡೆಯಿತು. ರಾಜ್ಯ ಪಶುಸಂಗೋಪನ ಸಚಿವ ಪ್ರಭು ಚವಾಣ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಹಾಗೂ ವಿದ್ವಾಂಸರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.