ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ತಂತ್ರಜ್ಞಾನ ಬಳಸಿ ಲಾಭ ಪಡೆದ ತೋಟಗಾರಿಕೆ ರೈತರು

Last Updated 4 ಮೇ 2020, 1:27 IST
ಅಕ್ಷರ ಗಾತ್ರ

ರಾಯಚೂರು: ಲಾಕ್‌ಡೌನ್‌ನಿಂದ ಸಂಷಕ್ಟಕ್ಕೆ ಸಿಲುಕಿದ್ದ ತೋಟಗಾರಿಕೆ ಬೆಳೆ ಬೆಳೆದಿರುವ ರೈತರನ್ನು ನಷ್ಟದಿಂದ ಪಾರು ಮಾಡುವುದಕ್ಕಾಗಿ ದೇವುಸೂಗೂರಿನ ‘ಪರಿಸರ ಪ್ರೇಮಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ’ಯು ಮೊಬೈಲ್‌ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿರುವುದು ಗಮನ ಸೆಳೆಯುತ್ತಿದೆ.

ಅಕ್ಷಯ ತೃತೀಯ ನಿಮಿತ್ತ ಏಪ್ರಿಲ್‌ 26 ರಂದು ಆ್ಯಪ್‌ ಕಾರ್ಯಾರಂಭಿಸಿದ್ದು, ಶಕ್ತಿನಗರವೊಂದರಲ್ಲೇ ಇದುವರೆಗೂ 600 ಕ್ಕೂ ಹೆಚ್ಚು ಜನರು ₹500 ಮೌಲ್ಯದ ಹಣ್ಣುಗಳನ್ನು ಬುಕಿಂಗ್‌ ಮಾಡಿಕೊಂಡು ಮನೆಗಳಿಗೆ ಹಣ್ಣಿನಪೊಟ್ಟಣ ತಂದುಕೊಂಡಿದ್ದಾರೆ. ಶಿವಕುಮಾರ್‌ ಎನ್ನುವವರು ಈ ಮೊಬೈಲ್‌ ಅ್ಯಪ್‌ ಅಭಿವೃದ್ಧಿ ಮಾಡಿಕೊಟ್ಟಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತಿದೆ. ಕುಳಿತಲ್ಲಿಯೇ ಹಣ್ಣುಗಳನ್ನು ಮಾರಾಟ ಮಾಡುವುದಕ್ಕೆ ರೈತರ ಕಂಪೆನಿಗೆ ಸಾಧ್ಯವಾಗಿದ್ದರೆ, ಗ್ರಾಹಕರು ಮನೆಯಲ್ಲಿದ್ದುಕೊಂಡು ರಿಯಾಯ್ತಿ ದರದಲ್ಲಿ ಹಣ್ಣುಗಳನ್ನು ಖರೀದಿಸಿದ ಸಂತೃಪ್ತಿ ಮೂಡಿದೆ.

ಇದೀಗ ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದರಿಂದ ಹಣ್ಣುಗಳ ಖರೀದಿಗಾಗಿ ಪ್ರತಿನಿತ್ಯ ಜನರು ಧಾವಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಂಪೆನಿಯಿಂದ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್‌ ಬುಕಿಂಗ್‌ ಪಡೆದುಕೊಂಡು ಪ್ರತಿ ಬುಧವಾರ ಮತ್ತು ಭಾನುವಾರ ‘ಹೋಂ ಡೆಲಿವರಿ’ ಕೂಡಾ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಯಚೂರು ನಗರಕ್ಕೂ ಬುಕಿಂಗ್‌ ವಿಸ್ತರಿಸುವ ಯೋಜನೆಯನ್ನು ಕಂಪೆನಿ ಹೊಂದಿದೆ.

ರೈತರಿಂದ ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸದ್ಯಕ್ಕೆ ₹50 ಕ್ಕೆ ಒಂದು ಕೆಜಿ ಅಂಜೂರ, ₹60 ಕ್ಕೆ ಒಂದು ಕೆಜಿ ಮಾವು, ₹50 ಕ್ಕೆ ಒಂದು ಕೆಜಿ ದ್ರಾಕ್ಷಿ, ₹30ಕ್ಕೆ ಒಂದು ಕೆಜಿ ಮೊಸಂಬಿ ಹಾಗೂ ₹15ಕ್ಕೆ ಒಂದು ಕೆಜಿ ಕಲ್ಲಂಗಡಿ ಹಣ್ಣು ಮಾರಾಟ ಆಗುತ್ತಿದೆ. ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಸಂಚಾರಿ ವಾಹನದಲ್ಲಿ ತರಕಾರಿ ಮಾರಾಟ ಕೂಡಾ ನಡೆಯುತ್ತಿದೆ. ಇದಕ್ಕಾಗಿ ದೇವಸುಗೂರು ಹೋಬಳಿಯಲ್ಲಿ ಐದು ಸಂಚಾರಿ ವಾಹನಗಳು ಕಾರ್ಯನಿರತವಾಗಿವೆ.

‘ಹಣ್ಣುಗಳನ್ನು ಬೆಳೆದಿರುವ ರೈತರು ನಷ್ಟ ಅನುಭವಿಸಬಾರದು ಎನ್ನುವ ಉದ್ದೇಶ ಕಂಪೆನಿಯದ್ದು. ಲಾಕ್‌ಡೌನ್‌ ಸಮಯದಲ್ಲಿ ಮೊಬೈಲ್ ನೆರವಿಗೆ ಬಂದಿದ್ದು, ವೇಗವಾಗಿ ಹಣ್ಣುಗಳ ಮಾರಾಟ ಮಾಡುವುದಕ್ಕೆ ಸಾಧ್ಯವಾಗಿದೆ’ ಎಂದು ಕಂಪೆನಿಯ ಅಧ್ಯಕ್ಷ ಸರ್ವೆಶ ರಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಸರ ಪ್ರೇಮಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿಯಲ್ಲಿ ದೇವಸುಗೂರು ಮತ್ತು ಚಂದ್ರಬಂಡಾ ಹೋಬಳಿಯ 1,011 ರೈತರು ಸದಸ್ಯರಿದ್ದಾರೆ. ಅವರು ಬೆಳೆಯುವ ಹಣ್ಣುಗಳನ್ನು ಕಂಪೆನಿ ಮೂಲಕ ಮಾರಾಟ ಮಾಡುತ್ತಿದ್ದು, ಇಡೀ ರಾಜ್ಯಕ್ಕೆ ಇದು ಮಾದರಿಯಾಗಿದೆ’ ಎಂದು ರಾಯಚೂರು ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT