ರಾಯಚೂರು: ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್) ಆಸ್ಪತ್ರೆಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸಿಬ್ಬಂದಿ ನೇಮಕ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಿಮ್ಸ್ ಹಿಂದಿನ ನಿರ್ದೇಶಕರು ಅಧಿಕಾರ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್ಕೆ) ಯೋಜನೆಯಡಿಯಲ್ಲಿ ಕ್ಲೇಮುಗಳ ತ್ವರಿತ ವಿಲೇವಾರಿಗಾಗಿ ನೇಮಕ ಮಾಡಿದ ಸಿಬ್ಬಂದಿಯನ್ನು ಬೇರೆ ಬೇರೆ ವಿಭಾಗಗಳಿಗೆ ನಿಯೋಜನೆ ಮಾಡಲಾಗಿದೆ. ಸರ್ಕಾರದಿಂದ ಸೃಜನ ಮಾಡದ ಉದ್ಯೋಗಗಳನ್ನು ಸೃಷ್ಟಿಸಿ ನೇಮಕ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಹಿಂದಿನ ನಿರ್ದೇಶಕ ಡಾ.ಬಸವರಾಜ ಪೀರಾಪುರ ಅವರ ಅಧಿಕಾರದ ಅವಧಿಯಲ್ಲೇ ಅಕ್ರಮ ನಡೆದಿದೆ ಎಂದು ರಿಮ್ಸ್ ವಲಯದಲ್ಲಿ ಚರ್ಚೆ ನಡೆದಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕ್ಲೇಮುಗಳ ತ್ವರಿತ ವಿಲೇವಾರಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 2019ರಲ್ಲಿ ಮೂವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಆನಂತರ ಇಬ್ಬರು ಹೆಚ್ಚುವರಿ ಸೇರಿ ಒಟ್ಟು ಐದು ಸಿಬ್ಬಂದಿಯ ನೇಮಕ ಮಾಡಿಕೊಂಡಿದ್ದರು. ಇಬ್ಬರು ಹೆಚ್ಚುವರಿ ಸಿಬ್ಬಂದಿ ಇರುವಾಗಲೇ ಹಿಂದಿನ ರಿಮ್ಸ್ ನಿರ್ದೇಶಕರು 2019ರಲ್ಲಿ ಒಂದು ಬಾರಿ 10 ಹಾಗೂ ಇನ್ನೊಂದು ಬಾರಿ 7 ಹೀಗೆ ಒಟ್ಟು 17 ಸಿಬ್ಬಂದಿಯನ್ನು ಕಿಯೋನಿಕ್ಸ್ ಸಂಸ್ಥೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದಾರೆ.
ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಮುಂಚೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ನೇಮಕಾತಿ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಬೇಕು. ಆದರೆ ಡಾ.ಬಸವರಾಜ ಪೀರಾಪುರ ಅವರು ನಿಯಮಗಳನ್ನು ಗಾಳಿಗೆ ತೂರಿ 17 ಸಿಬ್ಬಂದಿಯನ್ನು ಆಯುಷ್ಮಾನ್ ಭಾರತ ಯೋಜನೆಯಡಿ ತ್ವರಿತ ಕ್ಲೇಮುಗಳ ವಿಲೇವಾರಿ ಹೆಸರಿನಲ್ಲಿ ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ. ನೇಮಕ ಮಾಡಿಕೊಂಡ ಸಿಬ್ಬಂದಿಯನ್ನು ಡಾಟಾ ಎಂಟ್ರಿ ಆಪರೇಟರ್, ರಕ್ತ ಭಂಡಾರ, ರೇಡಿಯಾಲಜಿ, ಬಿಲ್ಲಿಂಗ್ ಕೌಂಟರ್, ಪೆಥಾಲಜಿ, ಕಮ್ಯುನಿಟಿ ಮೆಡಿಸನ್, ರಿಮ್ಸ್ ಕಾಲೇಜು, ಸಬ್ ಸ್ಟೋರ್, ವೈದ್ಯಕೀಯ ಅಧೀಕ್ಷಕರ ಕಚೇರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸಕ್ಕೆ ನಿಯೋಜನೆ ಮಾಡಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಹೇಳುತ್ತಾರೆ.
‘ಕಾನೂನು ಬಾಹೀರವಾಗಿ ನಿಯೋಜಿಸಿದ ಸಿಬ್ಬಂದಿಗೆ ಕಿಯೋನಿಕ್ಸ್ ಸಂಸ್ಥೆಯಿಂದ ಮಾಸಿಕ ₹20 ಸಾವಿರ ವೇತನವೂ ಪಾವತಿಯಾಗುತ್ತಿದೆ. ಆ ಮೂಲಕ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು 2024ರ ಫೆಬ್ರುವರಿ 9ರಂದು ಸಾಮಾಜಿಕ ಕಾರ್ಯಕರ್ತ ವೀರೇಶ ಅವರು ಹಾಲಿ ನಿರ್ದೇಶಕ ಡಾ.ರಮೇಶ ಬಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಯಾವುದೇ ಹುದ್ದೆಗೆ ನೇಮಕ ಮಾಡಿಕೊಳ್ಳುವ ಮುಂಚೆ ಸರ್ಕಾರದಿಂದ ಮಾಹಿತಿ ನೀಡಿ ಅಧಿಸೂಚನೆ ಹೊರಡಿಸಬೇಕು. ಅಕ್ರಮ ನೇಮಕಾತಿಯ ಬಗ್ಗೆ ಹಾಲಿ ನಿರ್ದೇಶಕ ಡಾ.ರಮೇಶ ಬಿ ಅವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ, ಹಿಂಬರಹವೂ ನೀಡಿಲ್ಲ. ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. 17 ಸಿಬ್ಬಂದಿಗೆ ಇದುವರೆಗೆ ನೀಡಿರುವ ವೇತನ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ವೀರೇಶ ಹೇಳಿದ್ದಾರೆ.
‘ದೂರು ಪರಿಶೀಲಿಸಿ ಮುಂದಿನ ಕ್ರಮ’
‘ಅಕ್ರಮ ಸಿಬ್ಬಂದಿ ನೇಮಕ ಬಗ್ಗೆ ದೂರು ಬಂದಿರುವುದು ನಿಜ. ನಾನು ಅಧಿಕಾರ ವಹಿಸಿಕೊಂಡು ಮೂರು ತಿಂಗಳಷ್ಟೇ ಆಗಿದೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ. ತಿಳಿಸಿದರು.
‘ವೇತನ ಪಾವತಿಯಷ್ಟೇ ನನ್ನ ಕೆಲಸ’
‘ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರ ನಿರ್ದೇಶಕರಿಗೆ ಇದೆ. ಯಾವ ಮಾನದಂಡದ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ನೇಮಕಾತಿ ಮಾಡಿಕೊಂಡ ಬಳಿಕ ಆದೇಶ ಪತ್ರ ಹಾಗೂ ಕೆಲಸ ಮಾಡಿದ ಹಾಜರಾತಿಯ ಆಧಾರದ ಮೇಲೆ ವೇತನ ಪಾವತಿಸುವುದಷ್ಟೇ ನನ್ನ ಕೆಲಸ’ ಎಂದು ರಿಮ್ಸ್ನ ಆರ್ಥಿಕ ಸಲಹೆಗಾರ ಹನುಮೇಶ ನಾಯಕ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.