ರಾಯಚೂರು: ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸಾರ್ವಜನಿಕರಿಗೆ ಮನವೊಲಿಸುವ ನಿಟ್ಟಿನಲ್ಲಿ ಭಾರತ ಸೇವಾದಳ ವತಿಯಿಂದ ನಗರದ ಮುನ್ನೂರುವಾಡಿ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ ಜಾಥಾ ಈಚೆಗೆ ನಡೆಸಲಾಯಿತು.
ಜಲಾಲ್ ನಗರ, ಗಂಜ್ ಬಡಾವಣೆ, ಮನೆ-ಮನೆಗೆ ತೆರಳಿ ಉಚಿತ ಕಡ್ಡಾಯ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ಕರ ಪತ್ರ ಹಂಚುವುದರ ಮೂಲಕ ಮನವರಿಕೆ ಮಾಡಲಾಯಿತು.
ಜಾಥಾಕ್ಕೆ ಚಾಲನೆ ನೀಡಿದ ಶಾಲೆಯ ಮುಖ್ಯೋಪಾಧ್ಯಯ ತಿಮ್ಮಣ್ಣ ಮಾತನಾಡಿ, ಸಮವಸ್ತ್ರ, ಪಠ್ಯೇಪುಸ್ತಕ, ಬಿಸಿಊಟ, ಹಾಲು, ಎಲ್ಲವನ್ನು ವಿದ್ಯಾರ್ಥಿಗಳ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ನೀಡುತ್ತಿದೆ. ನುರಿತ ಅನುಭವಿ ಶಿಕ್ಷಕರು ಭೋಧನೆ ಮಾಡುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಪ್ಪದೇ ಸೇರಿಸಬೇಕು ಎಂದು ಮನವಿ ಮಾಡಿದರು.
ಜಾಥಾದ ಸಂಚಾಲಕರಾದ ಭಾರತ ಸೇವಾದಳದ ಜಿಲ್ಲಾ ಸಂಘಟಿಕರಾದ ವಿದ್ಯಾಸಾಗರ ಚಿಣಮಗೇರಿ ಮಾತನಾಡಿ, ರಾಜದಾದ್ಯಂತ ಸೇವಾದಳ ವತಿಯಿಂದ ಉಚಿತ ಕಡ್ಡಾಯ ಶಿಕ್ಷಣ ಆಂದೋಲನ ಹಮ್ಮಿಕೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಮಿಂಚಿನ ಸಂಚಾರ ತಂಡದ ಸಿ.ಆರ್.ಪಿ.ಗಳಾದ ಯಂಕೋಬಾ, ಮಾರೆಪ್ಪ, ಪ್ರೌಢಶಾಲೆ ಮುಖ್ಯ ಗುರು ಪುಷ್ಪ, ದೈಹಿಕ ಶಿಕ್ಷಕಿ ಶಶಿಕಲಾ, ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಚಾರ್ಯ ಶರಣಪ್ಪ, ಶಿಕ್ಷಕ ಶಿವುಕುಮಾರ, ಸೇವಾದಳದ ವಿದ್ಯಾರ್ಥಿಗಳು & ಶಿಕ್ಷಕರು ಇದ್ದರು.