ರಾಯಚೂರು: ರಾಜ್ಯ ಸರ್ಕಾರ ಈಚೆಗೆ ವಿದ್ಯುತ್ ದರ ಹೆಚ್ಚಿಸಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕಂದಿಲ್ ಹಿಡಿದು ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಆನಂತರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಕೋವಿಡ್ ಸಂಕಷ್ಟದಲ್ಲಿ ಜನರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವೇತನ ಕಡಿತ ಮಾಡಿದೆ. ರೈತರು ಕೂಡ ಕೋವಿಡ್ ಪರಿಣಾಮ ಮಾರುಕಟ್ಟೆಯಲ್ಲಿ ಸೂಕ್ತಬೆಲೆ ದೊರೆಯದೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ವಿದ್ಯುತ್ ಕಂಪನಿಗಳು ದರ ಏರಿಕೆ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಬಳಕೆಯ ಎಲ್ಲಾ ವರ್ಗದ ಜನರಿಗೆ ಯುನಿಟ್ ಗೆ 40ಪೈಸೆ ಹೆಚ್ಚಿಗೆ ಮಾಡಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗಿದೆ. ಸಂಕಷ್ಟದ ಸಮಯದಲ್ಲಿ ಬಡವರ ಸಹಾಯಕ್ಕೆ ನಿಲ್ಲಬೇಕಾದ ಸರ್ಕಾರ ಮತ್ತಷ್ಟು ಸಮಸ್ಯೆಗೆ ದೂಡುತ್ತಿದೆ. ಸರ್ಕಾರದ ಒಡೆತನ ವಿದ್ಯುತ್ ವ್ಯವಸ್ಥೆಯನ್ನು ಖಾಸಗಿ ಬಂಡವಾಳಗಾರರ ಲಾಭಗಳಿಸಲು ಖಾಸಗೀಕರಣಕ್ಕೆ ಮುಂದಾಗಿದ್ದು ಸರಿಯಲ್ಲ. ಸರ್ಕಾರ ತಕ್ಷಣವೇ ವಿದ್ಯುತ್ ದರದ ಏರಿಕೆಯ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ಕಾರ್ಯಾಧ್ಯಕ್ಷ ಎನ್.ಶಿವಶಂಕರ ವಕೀಲ, ಜಿಲ್ಲಾ ಯುವ ಅಧ್ಯಕ್ಷ ಪವನ ಕುಮಾರ, ಯೂಸುಫ್ ಖಾನ್, ಬಿ. ತಿಮ್ಮಾರೆಡ್ಡಿ, ರಾಮಕೃಷ್ಣ, ವಿಶ್ವನಾಥ ಪಟ್ಟಿ, ಅಕ್ಬರ್ ನಾಗುಂಡಿ, ನರಸಿಂಹಲು, ನರಸಪ್ಪ ಆಶಾಪುರ, ಮೂಕಯ್ಯ, ಕುಮಾರಸ್ವಾಮಿ, ಬಾಬು, ಸಾಧಿಕ್ ಪ್ರತಿಭಟನೆಯಲ್ಲಿ ಇದ್ದರು.