ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದ ನಿವಾಸಿ ಸೂಲಗಿತ್ತಿ ಕಮಲಮ್ಮ ಅವರಿಗೆ ಈ ಬಾರಿ ಜಾನಪದ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕಮಲಮ್ಮ ಅವರು 500 ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ. ತಾಯಿಗೆ ಹೆರಿಗೆ ಮಾಡಿಸಲು ಸಹಾಯ ಮಾಡುತ್ತಾ, ಸೂಲಗಿತ್ತಿ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಮಲಮ್ಮ ಅವರಿಗೆ ಓದು ಬರಹ ಗೊತ್ತಿಲ್ಲ. ಆದರೆ ಇವರು ಬಹುಮುಖ ಜಾನಪದ ಪ್ರತಿಭಾವಂತರು.
ಸೋಬಾನೆ, ಜೋಗುಳ, ಬುರಾ ಕಥಾ, ಜಾನಪದ ಹಾಡುತ್ತಾರೆ. ಕಮಲಮ್ಮ ಅವರಲ್ಲಿ ಜಾನಪದ ಜ್ಞಾನದ ಭಂಡಾರವೇ ಇದೆ. ಅಲೆಮಾರಿ ಸಮುದಾಯದ ಇವರು ಗಿಡಮೂಲಿಕೆ ನೀಡುವಲ್ಲಿಯೂ ಪರಿಣಿತಿ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಎಲೆಮರೆ ಕಾಯಿಯಂತೆ ಜನಪದ ಕಲೆಯನ್ನು ಬೆಳಸುತ್ತಾ ಬಂದಿದ್ದಾರೆ.