ರಾಯಚೂರು: ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಈಚೆಗೆ ನಗರ ಶಾಸಕ ಡಾ. ಶಿವರಾಜ ಪಾಟೀಲರು ಹೇಳಿಕೆ ನೀಡಿರುವುದು ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧವಾಗಿದೆ. ಕೂಡಲೇ ಶಾಸಕರ ವಿರುದ್ಧ ನಾಡದ್ರೋಹ ಆರೋಪದಡಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಚಲಪತಿಗೌಡ ಬಣ) ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸೋಮವಾರ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜವಾಬ್ದಾರಿಯುತ ಶಾಸಕರಾಗಿ ರಾಜ್ಯಕ್ಕೆ ಅವಮಾನವಾಗುವಂತೆ ಹೇಳಿಕೆ ನೀಡಿದ್ದು ಅಖಂಡ ಕರ್ನಾಟಕ ನಿರ್ಮಾಣಕ್ಕೆ ಮಾಡಿದ ಸಾವಿರಾರು ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ನೆಲ, ಜಲ, ಭಾಷೆ, ಸಂಸ್ಕೃತಿ ಕಾಪಾಡಿಕೊಂಡು ಪ್ರಮಾಣ ಮಾಡಿ ಈಗ ಕನ್ನಡ ವಿರೋಧಿ ಹೇಳಿಕೆ ನೀಡಿ ಉದ್ಧಟತನ ಮೆರೆದಿದ್ದಾರೆ. ಕೂಡಲೇ ಶಾಸಕರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು.ಇಲ್ಲದಿದ್ದಲ್ಲಿ ಹೋರಾಟತೀವ್ರ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಚಳವಳಿ ಚಲಪತಿಗೌಡ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಿವು ಮೋನಯ್ಯ, ಇಮ್ರಾನ್ ಬಡೇಸಾಬ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಇಂದಿರಾ, ಜಿಲ್ಲಾಧ್ಯಕ್ಷ ನರಸಿಂಹ, ರಾಮು, ಶ್ರೀನಿವಾಸ ಕೊಪ್ಪರ, ಶಫಿ ಇದ್ದರು.