ರಾಯಚೂರು: ಮೆಗಾಸ್ಟಾರ್ ಚಿರಂಜಿವಿ ನಟಿಸಿರುವ ‘ಸೈರಾ ನರಸಿಂಹರೆಡ್ಡಿ’ ಸಿನಿಮಾ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ನೀಲಕಂಠೇಶ್ವರ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಸದಸ್ಯರನ್ನು ಪೊಲೀಸರು ಬುಧವಾರ ಬಂಧಿಸಿ, ಆನಂತರ ಬಿಡುಗಡೆಗೊಳಿಸಿದರು.
ನಾಲ್ಕು ಭಾಷೆಯಲ್ಲಿ ಸಿನಿಮಾ ತೆರೆಕಂಡಿದ್ದರೂ ಚಿತ್ರಮಂದಿರದ ಮಾಲೀಕರು ತೆಲುಗು ಭಾಷೆಯಲ್ಲಿ ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ. ಆದ್ದರಿಂದ ತೆಲುಗು ಭಾಷೆಯಲ್ಲಿ ಚಿತ್ರಪ್ರದರ್ಶನ ರದ್ದುಪಡಿಸಿ, ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕನ್ನಡ ಭಾಷೆಯಲ್ಲಿ ಕೂಡ ಸಿನಿಮಾ ಮಾಡಲಾಗಿದ್ದು, ಕನ್ನಡದ ನಟ ಸುದೀಪ ಅಭಿನಯಿಸಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಸಿನಿಮಾ ಕನ್ನಡ ಭಾಷೆಯಲ್ಲಿ ಪ್ರದರ್ಶನ ಮಾಡಬೇಕು. ಇದರಿಂದ ಪರಭಾಷಿಕರು ಕೂಡ ಕನ್ನಡ ಕಲಿಯಲು ಸಹಾಯವಾಗಲಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ, ಕೊಂಡಪ್ಪ, ರಮೇಶ ಪಡಕೋಟೆ, ಟಿ.ವಿರುಪಾಕ್ಷಿ, ಸಾಧಿಕ್, ಹೊನ್ನಪ್ಪ, ಚಾಂದಪಾಷ, ಫೆರೋಜ್, ಬಿ.ಎಂ.ವಿಶಾಲ್, ನರಸಿಂಹ ಯಾದವ್, ಮೌಲಾಲಿ, ಶರಣಪ್ಪ, ನರಸಪ್ಪ ಇದ್ದರು.