ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರ: ಹೊಸಮುಖಗಳ ಪೈಪೋಟಿ

ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರ
Last Updated 29 ನವೆಂಬರ್ 2021, 19:32 IST
ಅಕ್ಷರ ಗಾತ್ರ

ರಾಯಚೂರು: ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಿಂದ ಹಿಂದೊಮ್ಮೆ ಬಿಜೆಪಿ ಜಯ ಸಾಧಿಸಿದ್ದು ಹೊರತುಪಡಿಸಿದರೆ, ಕಾಂಗ್ರೆಸ್‌ ಪಕ್ಷವೇ ಇದನ್ನು ತನ್ನ ಭದ್ರಕೋಟೆ ಮಾಡಿಕೊಂಡಿದೆ. ಈ ಸಲವೂ ಎರಡೂ ಪಕ್ಷಗಳ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.

ಮತದಾರರು ಪಕ್ಷ ಅಥವಾ ಅಭ್ಯರ್ಥಿಗೆ ಒಲವು ತೋರಿ ಮತ ಕೊಡುತ್ತಾರೆ ಎಂಬ ವಾತಾವರಣ ಕಾಣುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಪಕ್ಷದ ಚಿಹ್ನೆಯಿಂದ ಆಯ್ಕೆಯಾದವರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯ ಸುಮ್ಮನೇ ಮತ ಹಾಕುವುದಿಲ್ಲ. ಸದಸ್ಯರು ತಮ್ಮ ಒಂದು ಮತಕ್ಕೆ ಎಷ್ಟು ಹಣ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಚುನಾವಣೆಯ ಗೆಲುವು ಹಣದಿಂದ ನಿರ್ಧಾರವಾಗುತ್ತದೆ’ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.

‘ಹಣವೊಂದೇ ಮಾನದಂಡ ವಾಗದು. ಸಮಸ್ಯೆಗಳಿಗೆ ಯಾರು, ಹೇಗೆ ಸ್ಪಂದಿಸುವರು ಎಂಬುದನ್ನೂ ಮತದಾರರು ನೋಡುತ್ತಾರೆ. ವಿಧಾನ ಪರಿಷತ್ತಿಗೆ ಆಯ್ಕೆಯಾದವರು, ಮತ್ತೆ ಮತದಾರರ ಎದುರು ಬರುವುದಿಲ್ಲ. ಈಗಲೇ ಅಭ್ಯರ್ಥಿಗಳು ತಮ್ಮೆಲ್ಲ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹೇಳುತ್ತಾರೆ.

ಪ್ರತಿಸ್ಪರ್ಧಿಗಳಿಬ್ಬರೂ ಕೋಟ್ಯಧೀಶರು: ಕೊಪ್ಪಳ–ರಾಯಚೂರು ಎರಡೂ ಜಿಲ್ಲೆಗಳ ವ್ಯಾಪ್ತಿಯ ವಿಧಾನ ಪರಿಷತ್‌ ಕ್ಷೇತ್ರಕ್ಕೆ ನಾಲ್ವರು ಆಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಮತ್ತು ಬಿಜೆಪಿ ಅಭ್ಯರ್ಥಿ ವಿಶ್ವನಾಥ ಎ.ಬನಹಟ್ಟಿ ಅವರ ಮಧ್ಯೆ ನೇರ ಹಣಾಹಣಿ ಇದೆ. ಆಸ್ತಿ ವಿವರದ ಪ್ರಕಾರ, ಇಬ್ಬರೂ ಕೋಟ್ಯಧೀಶರು. ಜನಹಿತ ಪಾರ್ಟಿ ಅಭ್ಯರ್ಥಿ ತಿರುಪತಿ ನರಸಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ನರೇಂದ್ರ ಆರ್ಯ ಕಣದಲ್ಲಿದ್ದಾರೆ.

ಉದ್ಯಮಿ ವಿಶ್ವನಾಥ ಬನಹಟ್ಟಿ ಅವರು ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರ ಸೂಚಿತ ಅಭ್ಯರ್ಥಿ ಎಂಬುದು ಸ್ಪಷ್ಟ. ‘ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯದ ವ್ಯಕ್ತಿಗೆ ಟಿಕೆಟ್‌ ನೀಡಲಾಗಿದೆ’ ಎಂಬ ಚರ್ಚೆ ಬಿಜೆಪಿ ನಾಯಕರಲ್ಲಿ ನಡೆದಿದೆ.

ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಅವರು, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸಹೋದರನ ಪುತ್ರ. ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರಿಗೆ ರಾಜಕೀಯ ಅನುಭವ ಇದೆ.

ಎರಡೂ ಜಿಲ್ಲೆಗಳ 12 ಶಾಸಕರ ಪೈಕಿ ಐವರು ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿಯಿಂದ ಆಯ್ಕೆಯಾದವರು. ಐವರು ಶಾಸಕರು ಕಾಂಗ್ರೆಸ್‌ನವರು. ಇಬ್ಬರು ಜೆಡಿಎಸ್‌ ಶಾಸಕರಿದ್ದು, ಇವರು ಯಾರನ್ನು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಸ್ಪರ್ಧೆಗೆ ನಿರಾಕರಣೆ

ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರು ಮತ್ತೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಈಗ ಪ್ರಚಾರ ನಡೆಸಿದ್ದಾರೆ. ‘ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬರುವುದಿಲ್ಲ. ವಿಧಾನ ಪರಿಷತ್‌ ಸದಸ್ಯನಾಗಿ ಸಮಸ್ಯೆಗಳಿಗೆ ಸ್ಪಂದಿಸದೆ ಇರಲು ನನ್ನಿಂದ ಆಗುವುದಿಲ್ಲ. ಹೀಗಾಗಿ ಟಿಕೆಟ್‌ ಬೇಡ ಎಂದು ವರಿಷ್ಠರಿಗೆ ಮೊದಲೇ ತಿಳಿಸಿದ್ದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT