ಸಿಂಧನೂರು: ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಸ್ಥಳೀಯ ನ್ಯಾಯಾಲಯದಲ್ಲಿ ನ.12 ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಹೇಳಿದರು.
ಕಳೆದ ಆಗಸ್ಟ್ 13 ರಂದು ನಡೆದ ಲೋಕ ಅದಾಲತ್ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಕೀಲರ ಸಹಕಾರದಿಂದ ಜಿಲ್ಲೆಯಲ್ಲಿಯೇ ಒಟ್ಟು 2,967 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಗಿತ್ತು. ಇದಕ್ಕೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಟುಂಬಗಳ ಮಧ್ಯೆ ಇರುವ ಪಾಲು ವಿಭಾಗ, ಜೀವನಾಂಶ, ಚೆಕ್ ಬೌನ್ಸ್ ಸೇರಿ ಇತರ ರಾಜಿ ಸಂಧಾನವಾಗುವ ಪ್ರಕರಣಗಳನ್ನು ಬಗೆಹರಿಸಲಾಗುವುದು. ರಾಜಿಯಾಗಲು ಯಾವುದೇ ಒತ್ತಾಯ ಇಲ್ಲ. ಅವರು ಸ್ವಇಚ್ಚೆಯಿಂದ ಬಗೆಹರಿಸಿಕೊಳ್ಳಲು ಒಪ್ಪಿಕೊಂಡರೆ ಮಾತ್ರ ರಾಜಿ ಮಾಡಲಾಗುವುದು. ಲೋಕ ಅದಾಲತ್ ದಿನವೇ ಎಲ್ಲ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಆಗದೇ ಇರುವುದರಿಂದ ಪೂರ್ವಭಾವಿಯಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ. ಹೀಗೆ ಬಗೆಹರಿದ ಪ್ರಕರಣಗಳ ಪಕ್ಷಗಾರರು ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಸಂಪೂರ್ಣವಾಗಿ ಹಿಂದಿರುಗಿಸಲಾಗುತ್ತದೆ ಎಂದು ವಿವರಿಸಿದರು.
ಈ ಹಿಂದೆ ನಡೆದ ಎಲ್ಲ ಲೋಕ ಅದಾಲತ್ ಯಶಸ್ವಿಗೊಳಿಸಿದಂತೆ ನ.12 ರಂದು ಜರುಗುವ ಲೋಕ ಅದಾಲತ್ನ್ನು ಯಶಸ್ವಿಗೊಳಿಸುವಂತೆ ಕೋರಿದರು.
ನ್ಯಾಯಾಧೀಶ ಆನಂದಪ್ಪ ಎಂ ಮಾತನಾಡಿ, ಕುಟುಂಬ ಸದಸ್ಯರ ಮಧ್ಯೆ ಉದ್ಬವಿಸುವ ಆಸ್ತಿ ವಿವಾದದ ಪ್ರಕರಣಗಳು ಅಪರಾಧ ಸ್ವರೂಪಕ್ಕೆ ತಿರುಗುತ್ತವೆ. ಇಂತಹವುಗಳನ್ನು ರಾಜಿಸಂಧಾನ ಮಾಡಿಸುವುದರಿಂದ ಸಮಾಜದ ನೆಮ್ಮದಿ ಕಾಪಾಡಲು ಅನುಕೂಲವಾಗುತ್ತದೆ ಎಂದರು.
ಲೋಕ ಅದಾಲತ್ನಲ್ಲಿ ಒಂದು ಬಾರಿ ರಾಜಿ ಸಂಧಾನವಾದ ಯಾವುದೇ ಪ್ರಕರಣಗಳ ವಿರುದ್ದ ಮುಂದಿನ ನ್ಯಾಯಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹೆಚ್ಚುವರಿ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ, ಕಾನೂನು ಪ್ರಾಧಿಕಾರದ ನಾರಾಯಣ ಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.