ರಾಯಚೂರು: ಕಳಪೆ ಮಟ್ಟದ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ವಸತಿ ನಿಲಯದಲ್ಲಿಬುಧವಾರ ವಿದ್ಯಾರ್ಥಿಗಳು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಹುಳು ಮಿಶ್ರಿತ ಆಹಾರ ನೀಡುತ್ತಿದ್ದಾರೆ. ಇಂತಹ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಮೇಲ್ವಿಚಾರಕರಿಗೆ ತಿಳಿಸಬೇಕೆಂದರೆ ಅವರು ತಿಂಗಳಿಗೊಮ್ಮೆ ಬರುತ್ತಾರೆ. ಕಷ್ಟ ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ನಿಲಯದಲ್ಲಿ ಜಿಮ್ ಸಾಮಗ್ರಿಗಳು ಇದ್ದರೂ, ಇಲ್ಲದಂತಾಗಿದೆ. ವ್ಯವಸ್ಥಿತ ಗ್ರಂಥಾಲಯ ಸೌಲಭ್ಯವು ಇಲ್ಲ. ಶೌಚಾಲಯಗಳು ಶುಚಿತ್ವದಿಂದ ಕೂಡಿಲ್ಲ ಈ ಕುರಿತು ಮೇಲ್ವಿಚಾರಕ ಹನುಮಂತರಾಯ ಇವರಿಗೆ ಮನವರಿಕೆ ಮಾಡಿದರೂ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಳದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ಕೂಡಲೇ ವಸತಿ ನಿಲಯಕ್ಕೆ ಅಗತ್ಯ ಸೌಲಭ್ಯಗಳು ಒದಗಿಸುವಂತೆ ಒತ್ತಾಯಿಸಿದರು.