ರಾಯಚೂರು: ಸಮಾಜದ ಅಂಕುಡೊಂಕು ತಿದ್ದಿದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮರ ಆಚಾರ ಮತ್ತು ವಿಚಾರಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ಕನ್ನಡ ಜಾನಪದ ಪರಿಷತ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದಾರ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮಹಾಸಾಧ್ವಿ ಶಿವಶರಣೆ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರೆಡ್ಡಿ ಸಮಾಜಕ್ಕೆ ಮಲ್ಲಮ್ಮ ಬಂಗಾರದ ಕಡ್ಡಿಯಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ವೀರರಲ್ಲಿ ಒಬ್ಬರಾಗಿದ್ದಾರೆ. ಅವರ ದಾರಿಯಲ್ಲಿ ಜೀವನ ಸಾಗಿಸಿದರೆ ಸಾರ್ಥಕತೆ ದೊರೆಯಲಿದೆ ಎಂದರು.
ರಾಜ್ಯದಲ್ಲಿ ಮಾತ್ರವಲ್ಲದೇ ಅಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮಾಜದವರು ನೆಲೆ ಕಂಡುಕೊಂಡಿದ್ದಾರೆ ಎಂದರು.
ತಹಶೀಲ್ದಾರ ಹಂಪಣ್ಣ, ರೆಡ್ಡಿ ಸಮಾಜದ ಮುಖಂಡರಾದ ಗಿರೀಶ ಪಾಟೀಲ್, ಬಸನಗೌಡ, ಮಲ್ಲಿಕಾರ್ಜುನ ಮೇಟಿ, ರೇಖಾ ಕೇಶವರೆಡ್ಡಿ, ಗುರುನಾಥ ರೆಡ್ಡಿ ಇದ್ದರು.