ರಾಯಚೂರು: ಮಂತ್ರಾಲಯದಲ್ಲಿಶ್ರಾವಣ ಶುಕ್ಲ ಚತುರ್ದಶಿಯಿಂದ ಶ್ರಾವಣ ಕೃಷ್ಣ ಪಂಚಮಿವರೆಗೆ ಆಗಸ್ಟ್ 14 ರಿಂದ 20 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ನಡೆಯಲಿದೆ.
14 ರ ಸಂಜೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಪ್ತ ರಾತ್ರೋತ್ಸವಕ್ಕೆ ಚಾಲನೆ ನೀಡುವರು. 16 ರಂದು ರಾಯರ ಪೂರ್ವಾರಾಧನೆ ನಿಮಿತ್ತ ತಿರುಮಲದ ಶ್ರೀ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ ಮಡಲಾಗುವುದು. 17 ರಂದು ರಾಯರ ಮಧ್ಯಾರಾಧನೆ ಹಾಗೂ 18 ರಂದು ಮಹಾರಥೋತ್ಸವ ಜರುಗುವುದು.
ಪ್ರತಿದಿನ ನಸುಕಿನ 4 ರಿಂದ 8.30 ರವರೆಗೂ ನಿರ್ಮಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಬೆಳಿಗ್ಗೆ 11 ರಿಂದ ಮೂಲ ರಘುಪತಿ ವೇದವ್ಯಾಸರಾಜರ ಪೂಜೆ ನಡೆಯುವುದು. ಸಂಜೆ 5 ಕ್ಕೆ ವಿಶೇಷ ಉಪನ್ಯಾಸ. ಸಂಜೆ 5.30 ರಿಂದ ರಾತ್ರಿ 11 ರವರೆಗೂ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.