ರಾಯಚೂರು:ಪಂಡಿತ್ ಪುಟ್ಟರಾಜ ಗವಾಯಿಗಳ 9ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಕ್ಟೋಬರ್ 26ರಂದು ಸಂಜೆ 6ಗಂಟೆಯಿಂದ ಅಹೋರಾತ್ರಿ ಸಂಗೀತ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದು ಪುಟ್ಟರಾಜ ಸಾಂಸ್ಕೃತಿಕ ವೇದಿಕೆಯ ಖಜಾಂಚಿ ಚಿನ್ನಯ್ಯ ಸ್ವಾಮಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ, ಬಸನಗೌಡ ದದ್ದಲ, ಅತಿಥಿಗಳಾಗಿ ಮುಖಂಡರಾದ ಅಶೋಕಗಸ್ತಿ, ಜಯಣ್ಣ, ಜಿ.ತಿಮ್ಮಾರೆಡ್ಡಿ, ಬಿ.ರಮೇಶ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕಲಾವಿದರಾದ ಆನೆಹೊಸೂರಿನ ಡಿ.ಮಂಜು, ಬಸಪ್ಪ ನಾಗರಾಳ, ಲಿಂಗಸುಗೂರಿನ ಮಾರುತಿ ಶಾಂತಾಪೂರು ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಕಲಾವಿದರು ಕೂಡ ಭಾಗವಹಿಸಿ ಅಹೋರಾತ್ರಿ ಸಂಗೀತ ಸೇವೆ ಮಾಡಲಿದ್ದಾರೆ ಎಂದರು.ವೇದಿಕೆಯ ಅಧ್ಯಕ್ಷ ಈರಣ್ಣ ಹೂಗಾರ, ವಿಜಯಕುಮಾರ, ಬಸಪ್ಪ, ಅಯ್ಯಪ್ಪ ಪಿಕಳಿಹಾಳ ಇದ್ದರು.