ಲಿಂಗಸುಗೂರು: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ರಾಠೋಡ ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು ದೃಡಪಟ್ಟಿದ್ದರಿಂದ ಸೇವೆಯಿಂದ ಅಮಾನತು ಗೊಳಿಸಿ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.
ರಾಯಚೂರು ಲೋಕಸಭಾ ವ್ಯಾಪ್ತಿ ಲಿಂಗಸುಗೂರು ತಾಲ್ಲೂಕು ಮುದಗಲ್ಲ ಹೋಬಳಿ ಮಟ್ಟದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಎಪ್.ಎಸ್.ಟಿ ತಂಡದಲ್ಲಿ ರಾಠೋಡ ಅವರನ್ನು ನಿಯೋಜಿಸಲಾಗಿತ್ತು.
ಏ. 5 ರಿಂದ ಏ.7 ಅವಧಿಯಲ್ಲಿ ಕರ್ತವ್ಯಕ್ಕೆ ಪೂರ್ವಾನುಮತಿ ಪಡೆಯದೆ ಗೈರು ಆಗಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ನಿಯೋಜಿಸಿ ತಾವೆ ಕರ್ತವ್ಯ ನಿಭಾಯಿಸಿದ್ದಾಗಿ ತಪ್ಪು ವರದಿ ಸಲ್ಲಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿತ್ತು.
ರಾಠೋಡ ಅವರು ಕಾರಣಕೇಳಿ ನೋಟಿಸ್ ಗೆ ಉತ್ತರಿಸಿದ್ದು ತಪ್ಪೊಪ್ಪಿಕೊಂಡಿದ್ದಾರೆ. ಸಹಾಯಕ ಚುನಾವಣಾಧಿಕಾರಿ ವರದಿ, ತಪ್ಪೊಪ್ಪಿಗೆ ಅಂಶಗಳ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ 1951, ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957 ರಡಿ ಅಮಾನತ್ತು ಗೊಳಿಸಿದ್ದಾರೆ. ಈ ಅವಧಿಯಲ್ಲಿ ಜೀವನಾಧಾರ ಭತ್ಯ ಪಡೆಯಬಹುದು. ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಳ ಬಿಡುವಂತಿಲ್ಲ ಎಂದು ಏ.13 ರಂದು ಹೊರಡಿಸಿದ ಆದೇಶದಲ್ಲಿ ಕಟ್ಟಳೆ ವಿಧಿಸಲಾಗಿದೆ.