ಲಿಂಗಸುಗೂರು: ಡೀಸೆಲ್, ಪೆಟ್ರೋಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಸ್ಫ್ಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಶಾಲಂಸಾಬ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ ಅವರು, ತೈಲ ಬೆಲೆಗಳು ಹೆಚ್ಚುತ್ತಲೇ ಇದ್ದು, ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರಗಳು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ಕೂಡಲೇ ಅಡುಗೆ ಅನಿಲದ ಬೆಲೆಯನ್ನು ಇಳಿಸಬೇಕು. ತೈಲಗಳ ಮೇಲೆ ವಿಧಿಸುವ ತೆರಿಗೆ ಕಡಿತಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಸದಂತೆ ಮಧ್ಯಸ್ಥಿಕೆ ವಹಿಸಬೇಕು. ಇಲ್ಲದೆ ಹೋದಲ್ಲಿ ರಾಷ್ಟ್ರವ್ಯಾಪಿ ತೈಲ ಬೆಲೆ ಏರಿಕೆ ವಿರೋಧಿ ಜನಾಂದೋಲನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ರಮೇಶ ವೀರಾಪುರ, ವಿರೇಶ ಸಿಕ್ಕ ಉಪ್ಪೇರಿ, ಶರಣಬಸವ, ಶಿವರಾಜ, ಹುಸೇನಪ್ಪ ಕಡೆಮನಿ, ಯಂಕಪ್ಪ ನಿಲೋಗಲ್, ಅಮರೇಶ ನಿಲೋಗಲ್, ಹುಸೇನಸಾಬ ಇದ್ದರು.