ಜಾಲಹಳ್ಳಿ: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹಮ್ಮಿಕೊಂಡ ಹೋರಾಟ ಬೆಂಬಲಿಸಿ ಸ್ಥಳೀಯ ವಾಲ್ಮೀಕಿ ಸಮಾಜದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ವಿಕಾಸ್ ಮೋಹನ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಗೋವಿಂದರಾಜ ನಾಯಕ ಮಾತನಾಡಿ, ಸಮುದಾಯದ ಜನಪ್ರತಿನಿಧಿಗಳಿಗೆ ಸ್ವಾಮೀಜಿ ಬಗ್ಗೆ ಗೌರವ ಹಾಗೂ ನಿಜವಾದ ಕಾಳಜಿ ಇದ್ದರೆ, ರಾಜಿನಾಮೆ ಬೀಸಾಕಿ ಹೊರಬರಬೇಕು. ಯಾವ ವರ್ಗಕ್ಕೆ ಮೀಸಲಾತಿಯ ಅವಶ್ಯಕತೆ ಇಲ್ಲವೊ ಆ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಕಿಡಿಕಾರಿದರು.
ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ನರಸಣ್ಣ ನಾಯಕ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7.5ಕ್ಕೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸಬೇಕು. ರಾಜ್ಯದಲ್ಲಿರುವ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಮುಖಂಡರಿಗೆ ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಶ್ರೀಮಂತರಿಗೆ ಮಾತ್ರ ಅದ್ಯತೆ ನೀಡುತ್ತಾರೆ ಎಂದು ದೂರಿದರು.
ಸಂಘಟಿರಾಗಿ ಸ್ವಾಮೀಜಿ ನಡೆಸುವ ಹೋರಾಟಕ್ಕೆ ಶಕ್ತಿ ತುಂಬು ಕೆಲಸ ಮಾಡಬೇಕಾಗಿದೆ ಎಂದರು.
ವಾಲ್ಮೀಕಿ ಸಂಘದ ಅಧ್ಯಕ್ಷ ತಿಮ್ಮಣ್ಣ ನಾಯಕ ದಿವಾನ, ಗ್ರಾ.ಪಂ ಅಧ್ಯಕ್ಷ ಅಯ್ಯಪ್ಪ ಸ್ವಾಮಿ, ಮುಖಂಡರಾದ ವಿಠೋಬ ನಾಯಕ, ಹನುಮಂತಪ್ಪ ಬಿಸಲ್, ರಾಜಾ ವಾಸುದೇವ ನಾಯಕ, ಮೇಲಪ್ಪ ಬಾವಿಮನಿ, ವಿನೋದ ಕುಮಾರ ಚಿಕ್ಕಲ್, ರಂಗನಾಥ ನಾಯಕ, ತಿಮ್ಮಣ್ಣ ಎಚ್.ಸಿದ್ದಾಪುರ ಇದ್ದರು.