ಮುದಗಲ್: ‘ಸಮೀಪದ ಕಿಲಾರಹಟ್ಟಿ ಗ್ರಾಮದ ಪ್ರಕರಣವನ್ನು ನಿರ್ಲಕ್ಷ್ಯ ಮಾಡಿದ ಮುದಗಲ್ ಠಾಣೆ ಪಿಎಸ್ಐ ಹಾಗೂ ಎಎಸ್ಐ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು‘ ಎಂದು ಆಗ್ರಹಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಲಿಂಗಸುಗೂರು ಡಿವೈಎಸ್ಪಿ ಎಸ್.ಎಸ್. ಹೂಲ್ಲೂರು ಅವರನ್ನು ಒತ್ತಾಯಿಸಿದರು.
ಹಲ್ಲೆ ಪ್ರಕರಣದಲ್ಲಿ ಭಾಗಿಯಾದ 40ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲು ಮಾಡಬೇಕು. ಪರಿಶಿಷ್ಟರಿಗೆ ರಕ್ಷಣೆ ನೀಡಬೇಕು. ಅನ್ಯಾಯಕ್ಕೆ ಒಳಗಾದ ಸಂತ್ರಸ್ತರಿಗೆ ₹ 10 ಲಕ್ಷ ಪರಿಹಾರ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣವಾದ ಬೈಲಪ್ಪ ಅವರ ಮಗಳನ್ನು ಪತ್ತೆಮಾಡಿ ಕುಟುಂಬದವರಿಗೆ ಒಪ್ಪಿಸಬೇಕು ಎಂದು ವಿವಿಧ ಸಂಘಟನೆ ಮುಖಂಡರು ಒತ್ತಾಯಿಸಿದರು.
ಡಿವೈಎಸ್ಪಿ ಎಸ್.ಎಸ್. ಹೂಲ್ಲೂರು ಮಾತನಾಡಿ, ಪ್ರಕರಣವನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುದಗಲ್ ಪಟ್ಟಣದಿಂದ ಕಿಲಾರಹಟ್ಟಿ ಗ್ರಾಮಕ್ಕೆ ವಿವಿಧ ಸಂಘಟನೆಗಳ ಪ್ರಮುಖರು ಬೈಕ್ ರ್ಯಾಲಿ ಮಾಡಿದರು.
ಸಂತ್ರಸ್ತರ ಮುನೆಗೆ ಲಿಂಗಸುಗೂರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಭೇಟಿ ನೀಡಿ ದಿನಸಿ ಕಿಟ್ ನೀಡಿ ಸಾಂತ್ವನ ಹೇಳಿದರು.
ಹಲ್ಲೆಗೊಳಗಾದ ಕಿಲಾರಹಟ್ಟಿ ಗ್ರಾಮದ ಬೈಲಪ್ಪ ಅವರ ಮನೆಗೆ ಸಾವಿತ್ರಿಬಾಯಿ ಫುಲೆ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ವೇದಿಕೆ ಸಂಚಾಲಕರು ಹಾಗೂ ಪರಿಶಿಷ್ಟ ಸಮುದಾಯದ ಮುಖಂಡರು ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು.