ರಾಯಚೂರು: ಸರ್ಕಾರದ ಹೇಳಿಕೆಯನ್ನು ಮನ್ನಿಸಿ ಕೆಲವು ಚಾಲಕರು ಮತ್ತು ನಿರ್ವಾಹಕರು ನೌಕರಿಗೆ ಹಾಜರಾಗಿದ್ದು, ರಾಯಚೂರು ವಲಯದ ಎಂಟು ಡಿಪೋಗಳಿಂದ ಬೆರಳೆಣಿಕೆಯಷ್ಟು ಬಸ್ ಗಳು ಸೋಮವಾರರಿಂದ ಯಥಾಪ್ರಕಾರ ಸಂಚಾರ ಆರಂಭಿಸಿವೆ.
ಯಾವುದೇ ಗಲಾಟೆ ಪ್ರಕರಣಗಳು ನಡೆದಿಲ್ಲ. ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರಲಾರಂಭಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮುನ್ನಚ್ಚರಿಕೆ ವಹಿಸಿರುವ ಪೊಲೀಸರು ಬಸ್ ನಿಲ್ದಾಣದಲ್ಲಿ ವಾಹನದಲ್ಲಿ ನಿಗಾ ವಹಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಇಲ್ಲ. ಅಲ್ಲಲ್ಲಿ ಪ್ರಯಾಣಿಕರು ಕುಳಿತಿದ್ದು, ಬಸ್ ಗಾಗಿ ಕಾಯುತ್ತಿದ್ದಾರೆ. ಡಿಪೋ ಅಧಿಕಾರಿಗಳು ಪ್ರಯಾಣಿಕರನ್ನು ವಿಚಾರಿಸಿ ಬಸ್ ಬಿಡುವ ವ್ಯವಸ್ಥೆ ಮುಂದುವರಿಸಿದ್ದಾರೆ.
ನಗರಸಾರಿಗೆ ಬಸ್ ಸೇವೆ ಕೂಡಾ ಆರಂಭವಾಗಿದೆ.ಬಸ್ ನಿಲ್ದಾಣದೊಳಗೆ ಅಂಗಡಿ ಮುಗ್ಗಟ್ಟು ವ್ಯಾಪಾರಿಗಳ ಮುಖದಲ್ಲಿ ಮತ್ತೆ ಮಂದಹಾಸ ಮರಳಿದ್ದು ವಹಿವಾಟು ಆರಂಭಿಸಿದ್ದಾರೆ.