ರಾಯಚೂರು: ಹಿರಿಯ ಸಾಹಿತಿ, ಶಿಕ್ಷಣ ತಜ್ಞ ರಾಮಣ್ಣ ಹವಳೆ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯೋತ್ಸವ ಗೌರವ ಲಭಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿಯ ಅವರ ಸಾಧನೆಯು ಅಪರೂಪ ಹಾಗೂ ಅನನ್ಯವಾಗಿದೆ, 'ಕೊಪ್ಪಳ ನಾಡಿನ ಸ್ವಾತಂತ್ರ್ಯ ಹೋರಾಟ', 'ಸ್ವಾತಂತ್ರ್ಯ ಸೇನಾನಿ ಪು಼ಡಲೀಕಪ್ಪ ಜ್ಞಾನಮೋಠೆ' ಸೇರಿ ಒಟ್ಟು 39 ಕೃತಿಗಳನ್ನು ರಚಿಸಿದ್ದಾರೆ.
ರಾಮಣ್ಣ ಹವಳೆ ಅವರು ಶಿಕ್ಷಕರಾಗಿ ರಾಯಚೂರಿನ ಮುನ್ನುರವಾಡಿಯ ಹಿರಿಯ ಪ್ರಾಥಮಿಕ ಶಾಲೆ, ಮಾನ್ವಿಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ. ರಾಯಚೂರಿನ ನವೋದಯ ಮಾದರಿ ವಸತಿ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಜಿಲ್ಲಾ ಶಿಕ್ಷಣ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.
1990ರಲ್ಲಿ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ, 1986ರಲ್ಲಿ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ಪ್ರಶಸ್ತಿ ದೊರಕಿದೆ. ಡಿಎಸ್ಆರ್ಟಿಸಿ ಸಂಯೋಗದಲ್ಲಿ 1995ರಿಂದ 2017ರ ವರೆಗೆ ಶೈಕ್ಷಣಿಕ ಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.
ಕೊಪ್ಪಳ ಜಿಲ್ಲೆ ಮೂಲದವರಾದರೂ ರಾಯಚೂರಿನ ಮುನ್ನೂರುಕಾಪು ಶಾಲೆಯ ಆಡಳಿತ ಅಧಿಕಾರಿಯಾಗಿ 21 ವರ್ಷ ಕಾರ್ಯನಿರ್ವಹಿಸಿರುವುದು ಗಮನಾರ್ಹವಾಗಿದೆ.
‘ಸರ್ಕಾರ ನನ್ನ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇಳಿ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲ ಮಾಡಲು ಪ್ರೇರಣೆ ದೊರಕಿದೆ’ ಎಂದು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.