ರಾಯಚೂರು: ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಏರಿಕೆ ಮಾಡಿದನ್ನು ಹಿಂಪಡೆಯುವಂತೆ ಒತ್ತಾಯಿಸಿಆಲ್ ಇಂಡಿಯಾ ಕಿಸಾನ್ ಖೇತ್ ಮಜ್ದೂರ್ ಸಂಘಟನೆ (ರೈತ-ಕೃಷಿ ಕಾರ್ಮಿಕರ ಸಂಘಟನೆ ಸಂಯೋಜಿತ)ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ರೈತರ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಈಡಾಗಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ. ರಸಗೊಬ್ಬರದ ಬೆಲೆಯನ್ನು ಶೇ 42 ರಷ್ಟು ಹೆಚ್ಚಿಸಿರುವ ನಿರ್ಧಾರವನ್ನು ಕೈಬಿಡಬೇಕು. ರೈತ ಕುಟುಂಬದವರು ತಿಂಗಳುಗಟ್ಟಲೆ ಶಕ್ತಿಯನ್ನು ಮೀರಿ ಬೆಳೆ ಬೆಳೆಯುತ್ತಿದ್ದಾರೆ. ಬೆಳೆಗೆ ತಕ್ಕಂತೆ ಬೆಲೆ ಕಟ್ಟುವ ಕನಿಷ್ಟ ಹಕ್ಕೂ ಇಲ್ಲದಂತಾಗಿದ ಎಂದರು.
ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ದಲ್ಲಾಳಿಗಳನ್ನು ಮೀರಿಸುವ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿ ಮಾರುವಂತಹ ಹೀನಾಯ ಸ್ಥಿತಿಗೆ ರೈತರು ತಲುಪಿದ್ದಾರೆ. ರೈತನಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ ಕೃಷಿ ಬೆಲೆ, ಸಾರಿಗೆ, ಸುಂಕ ಮತ್ತಿತರ ಹೊರೆಗಳು ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ರೈತರಿಗೆ ಸಾಲಬಾದೆ ಕಿರಿಕಿರಿಯಾಗಿದ್ದು, ಅವರ ಹಿತ ಕಾಪಾಡಬೇಕಿದ್ದ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.
ಕೃಷಿಯ ಒಂದೊಂದೇ ವಿಭಾಗಗಳನ್ನು ಕಾರ್ಪೋರೆಟ್ ಮಡಿಲಿಗೆ ಸರ್ಕಾರ ಹಾಕುತ್ತಿದೆ.ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜಾಗತೀಕರಣ, ಖಾಸಗೀಕರಣ ನೀತಿಗಳ ನೆರಳಿನಲ್ಲಿ ಬೀಜ, ಔಷಧಿ, ರಸಗೊಬ್ಬರ, ಕೃಷಿ ಸಲಕರಣೆಗಳ ಉತ್ಪಾದನೆ ಯನ್ನು ಖಾಸಗಿ ಕಂಪೆನಿಗಳಿಗೆ ಕೊಡಲಾಗಿದೆ. ಬೀಜದ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಇದೀಗ ಜಾರಿಗೆ ತಂದಿರುವ ಮೂರು ಕಾಯ್ದೆಗಳು ಹಾಗೂ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಸಹಿತ ಜಾರಿಗೆ ತಂದರೆ ರೈತನಿಗಿದ್ದ ಅಲ್ಪಸ್ವಲ್ಪ ರಕ್ಷಣೆಯನ್ನೂ ಕಿತ್ತುಕೊಂಡತಾಗುತ್ತದೆ ಎಂದು ದೂರಿದರು.
ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಜೀವನ ನಡೆಸುವುದು ಕಷ್ಟಕರವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರು ಬೆಳೆ ಬೆಳೆಯಲು ಅಗತ್ಯ ವಸ್ತುಗಳಾದ ಕೃಷಿ ಸಲಕರಣೆಗಳು, ಗೊಬ್ಬರ, ಬೀಜ, ಕ್ರಿಮಿನಾಶಕಗಳ ಬೆಲೆಗಳು ಇಳಿಕೆ ಮಾಡಬೇಕಾಗಿದೆ. ಡಿಎಪಿ ಗೊಬ್ಬರಕ್ಕೆ ₹1,200 ರಿಂದ ₹1,900 ಇದೆ. ಕಾಂಪ್ಲೆಕ್ಸ್ ಗಳಿಗೆ ₹615 ಇದೆ. ಈ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ರಾಮಣ್ಣ ಮರಕಂದಿನ್ನಿ, ಪ್ರಮೋದ್, ದುರ್ಗಣ್ಣ, ಜಮಾಲುದ್ದಿನ್, ಗೌಸ್, ಮಹಮ್ಮದ್, ಆಂಜಿನಯ್ಯ ಕಲ್ಲೂರು, ಮಲ್ಲನಗೌಡ, ಕಾರ್ತಿಕ್ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.