ರಾಯಚೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೋ ತೆಗೆದಿರಿಸಿ ಧ್ವಜಾರೋಹಣ ಮಾಡಿ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ದಲಿತ ಸೇನೆ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ಪಟ್ಟು ಹಿಡಿದು ಪೋಟೋ ತೆಗೆದಿರಿಸಿದ ಬಳಿಕ ಧ್ವಜಾರೋಹಣ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ನ್ಯಾಯಾಂಗ ವೃತ್ತಿಗೆ ದ್ರೋಹ ಮಾಡಿದ್ದಾರೆ. ಡಾ.ಬಾಬಾಬಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇವರು ನ್ಯಾಯಾಧೀಶರ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದರು.
ಜಿಲ್ಲಾ ನ್ಯಾಯಾಧೀಶರು ಗಳಿಸಿದ ಆಸ್ತಿ ವಿವರ ಪಡೆದು ತನಿಖೆ ನಡೆಸಿ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು. ದೇಶದ್ರೋಹ ಕಾಯ್ದೆಯಡಿ ರಾಜ್ಯದಿಂದ ಗಡಿಪಾರು ಮಾಡಬೇಕು. ಮುಂದಿನ ದಿನಗಳಲ್ಲಿ ಚುನಾವಣೆಗಳಲ್ಲಿಯೂ ಸ್ಪರ್ಧಿಸಲು ಅವಕಾಶ ಇಲ್ಲದಂತೆ ಅನರ್ಹಗೊಳಿಸಬೇಕು ಹಾಗೂ ಅವರು ನೀಡಿರುವ ತೀರ್ಪುಗಳನ್ನು ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಆಂಜಿನಯ್ಯ, ಉಪಾಧ್ಯಕ್ಷ ಮಾರುತಿ ಚಿಕ್ಕಸುಗೂರು, ಎಂ.ಸತೀಶ, ಆಂಜಿನಯ್ಯ ಚಿಕ್ಕಸುಗೂರು, ನಿಂಗಪ್ಪ ವಡ್ಲೂರು, ಬಾಬಾ, ಖಾಜಾ ಹುಸೇನ್, ರಘುವೀರ, ಭೀಮಣ್ಣ, ಸುರೇಶ ಬಾಬು ಇದ್ದರು.