ತುರ್ವಿಹಾಳ: ಪಟ್ಟಣದ ಪಶು ಆರೋಗ್ಯ ಕೇಂದ್ರದಲ್ಲಿ 5 ವರ್ಷದಿಂದ ಕಾಯಂ ವೈದ್ಯರಿಲ್ಲದ ಕಾರಣ, ರೈತರು ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ತುರ್ವಿಹಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹೊಸಳ್ಳಿ, ಕಲ್ಮಂಗಿ, ಊಮಲುಟಿ, ಗುಂಜಳ್ಳಿ ಪಂಚಾಯತಿ ವ್ಯಾಪ್ತಿಯ 35 ಗ್ರಾಮಗಳ ರೈತರು ಇಲ್ಲಿನ ಪಶು ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ, ಕಾಯಂ ವೈದ್ಯರು, ಸಿಬ್ಬಂದಿ ಇಲ್ಲ. ಇದರಿಂದಾಗಿ ಈ ಭಾಗದಲ್ಲಿನ ಸುಮಾರು 50 ಸಾವಿರ ಕುರಿಗಳು ಮತ್ತು 30 ಸಾವಿರ ಜಾನುವಾರುಗಳು ರಕ್ಷಣೆಗೆ ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಾನುವಾರುಗಳಿಗೆ ಕಾಲುಬಾಯಿ ರೋಗ, ಗಳಲೆ ರೋಗ, ಚಪ್ಪೆರೋಗ, ನರಡಿರೋಗ, ಚರ್ಮ ಗಂಟುರೋಗ, ಸೇರಿದಂತೆ ಅನೇಕ ರೋಗಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜಾನುವಾರುಗಳು ಸಾವನ್ನಪ್ಪುತ್ತಿವೆ. ಇದರಿಂದ ಹೈನುಗಾರಿಕೆ, ಕುರಿ ಸಾಗಾಣಿಕೆಯಂತ ಸ್ವಾವಲಂಬಿ ಜೀವನ ನಡೆಸುವ ರೈತ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ.
ಪಟ್ಟಣ ಪಂಚಾಯಿತಿ ಆದ ಮೇಲೆ ಕಾಯಂ ಪಶು ವೈದ್ಯರು ಬರಬಹುದು ಎನ್ನುವ ಜನರ ಆಶಾ ಭಾವನೆ ಹುಸಿಯಾಗಿದೆ.