ರಾಯಚೂರು: ಎಲ್ಲ ನಾಗರಿಕರಿಗೆ ಆಹಾರ ಭದ್ರತೆ ಒದಗಿಸಬೇಕು ಹಾಗೂ ಬಿಪಿಎಲ್, ಎಪಿಎಲ್ ಪಡಿತರದಾರರಿಗೆ ತಾರತಮ್ಯ ಮಾಡದೇ ಎಲ್ಲ ಕುಟುಂಬಗಳಿಗೆ ಅಗತ್ಯವಾದ 15 ಆಹಾರ ಪಡಿತರಗಳನ್ನು ನೀಡಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದರು.
ಈ ಬಗ್ಗೆ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳು ಪಡಿತರ ವ್ಯವಸ್ಥೆಯನ್ನು ದರ್ಬಲಗೊಳಿಸುತ್ತಿವೆ ಎಂದು ಆಪಾದಿಸಿದರು.
ಪ್ರತಿ ಕುಟುಂಬಕ್ಕೆ ಕೆಜಿಗೆ 2 ರೂಪಾಯಿ ದರದಲ್ಲಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ವಿತರಿಸಬೇಕು, ಬಡತನವನ್ನು ಅಳೆಯುವ ಯೋಜನಾ ಆಯೋಗದ ಅವೈಜ್ಞಾನಿಕ ಮತ್ತು ವಂಚಕ ಪದ್ಧತಿಯನ್ನು ತಿರಸ್ಕರಿಸಬೇಕು, ಇದು ಯಾವುದೇ ಕಲ್ಯಾಣ ಕಾರ್ಯಕ್ರಮಗಳಿಗೆ ಮಾನದಂಡ ಆಗಬಾರದು ಎಂದು ಆಗ್ರಹಿಸಿದರು.
ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು, ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು,ಕುಡಿಯುವ ನೀರು ಮತ್ತು ಮೇವು ವ್ಯವಸ್ಥೆ ಮಾಡಬೇಕು, ರೈತರಿಗೆ ಬೆಂಬಲ ಬೆಲೆ ಖಚಿತ ಪಡಿಸುವ ಹಾಗೂ ಲಾಭ ದೊರಕಿಸಿಕೊಡುವ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಸಿಪಿಐಎಂನ ಕಾರ್ಯದರ್ಶಿ ಕೆ.ಜಿ ವೀರೇಶ ಅವರು ತಹಸೀಲ್ದಾರರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಡಿ.ಎಸ್ ಶರಣಬಸವ, ಎಚ್.ಪದ್ಮಾ, ಚನ್ನಬಸಯ್ಯ, ಕುಮಾರ, ಶೇಕ್ಷಾಖಾದ್ರಿ, ಶ್ರೀಧರ, ಪಾರ್ವತಿ, ಸಂತೋಷಮ್ಮ, ಫರೀದಾ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.