ಮಸ್ಕಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವಾಲ್ಮೀಕಿ ವೃತ್ತ, ಕನಕವೃತ್ತದ ಮೂಲಕ ಸಾಗಿ ಹಳೆಯ ಬಸ್ ನಿಲ್ದಾಣದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಕ್ಕೆ ಆಗಮಿಸಿತು.
ಹಳೆ ಬಸ್ ನಿಲ್ದಾಣದ ಹೆದ್ದಾರಿ ಮೇಲೆ ಪ್ರತಿಭಟನಕಾರರು ಕೆಲ ಕಾಲ ಧರಣಿ ಕುಳಿತು ಘೋಷಣೆ ಕೂಗಿದರು. ಇದರಿಂದ ವಾಹನ ದಟ್ಟಣಿ ಹೆಚ್ಚಾಯಿತು. ಪೊಲೀಸರು ವಾಹನ ಕಳಿಸಲು ಪರದಾಡಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮುಖಂಡರಾದ ಪ್ರಸನ್ನ ಪಾಟೀಲ, ಆರ್. ಸಿದ್ದನಗೌಡ, ಹನುಮಂತಪ್ಪ ವೆಂಕಟಾಪುರ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.