ಕನಕಪುರ: ಕಾಡಾನೆಯೊಂದು ರೈತರೊಬ್ಬರ ಮೇಲೆ ದಾಳಿ ನಡೆಸಿ ಸೊಂಡಿಲಿನಿಂದ ಬಡಿದು ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಬಿಳಿದಾಳೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗಾಯಗೊಂಡವರನ್ನು ಬಿಳಿದಾಳೆ ಗ್ರಾಮದ ರೈತ ಕೊಂಡಯ್ಯ (58) ಎಂದು ಗುರುತಿಸಲಾಗಿದೆ. ಅವರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನಿನ ಕಡೆ ಹೋದಾಗ ಆನೆಯು ಓಡಿಸಿಕೊಂಡು ಬಂದು ಸೊಂಡಲಿನಿಂದ ದಾಳಿ ನಡೆಸಿದೆ.
ಸೊಂಡಿಲು ಸ್ವಲ್ಪ ತಾಕಿ ಕೆಳಕ್ಕೆ ಬಿದ್ದಿದ್ದಾರೆ. ಗ್ರಾಮದಲ್ಲಿದ್ದ ಬೀದಿ ನಾಯಿಗಳು ಜೋರಾಗಿ ಬೊಗಳಿದ್ದರಿಂದ ಆನೆ ಓಡಿ ಹೋಗಿದೆ. ನಾಯಿಗಳೇ ಕೊಂಡಯ್ಯನನ್ನು ಕಾಪಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅವರಿಗೆ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಲಾಗಿದೆ.