ರಾಮನಗರ: ‘ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ, ಯೋಜಿತವಾಗಿ ಅಧ್ಯಯನ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡುವುದರಿಂದ ನಮ್ಮ ಜ್ಞಾನದ ವ್ಯಾಪ್ತಿ ಹಿಗ್ಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇದರಿಂದ ಅನುಕೂಲವಾಗುತ್ತದೆ’ ಎಂದು ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಾ. ಶಿವಕುಮಾರ್ ಹೇಳಿದರು.
ನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಮುನ್ನೋಟ ಹಾಗೂ ಕಿರಿಯ
ವಿದ್ಯಾರ್ಥಿಗಳಿಗೆ ಸ್ವಾಗತ
ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಪಠ್ಯ ಮತ್ತು ಪಠ್ಯೇತರ ವಿಷಯದಲ್ಲಿ ಯೋಜನೆ ಅತಿ ಮುಖ್ಯ. ಶಿಕ್ಷಣ ಪೂರ್ಣಗೊಳ್ಳುವವರೆಗೂ ಅದನ್ನು ಶ್ರದ್ದೆಯಿಂದ ಪಾಲಿಸಬೇಕು. ಇದರಿಂದ ಜ್ಞಾನ ವೃದ್ಧಿ ಜೊತೆಗೆ ಶಿಸ್ತು ಮೈಗೂಡುತ್ತದೆ. 25 ವರ್ಷದೊಳಗಿನ ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ 6 ಗಂಟೆ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡಲ್ಲಿ, ಗುರಿ ಸಾಧನೆ ಸುಲಭವಾಗಲಿದೆ. ಭವಿಷ್ಯವೂ ಉಜ್ವಲವಾಗಿರುತ್ತದೆ’ ಎಂದರು.
‘ಜ್ಞಾನವೇ ಶಕ್ತಿ. ಜ್ಞಾನಕ್ಕೆ ಜಗತ್ತಿನಾದ್ಯಂತ ಬೆಲೆ ಇದ್ದು, ಅದನ್ನು ಕಟ್ಟಿ ಹಾಕಲು ಯಾರಿಂದಲು ಸಾಧ್ಯವಿಲ್ಲ. ಈ ಜಗತ್ತು ಯಾವುದಕ್ಕೂ ತಲೆ ಬಾಗದಿದ್ದರೂ, ಜ್ಞಾನಕ್ಕೆ ತಲೆ ಬಾಗುತ್ತದೆ. ಜ್ಞಾನ ವೃದ್ಧಿಗೆ ಪೂರಕವಾಗಿ ಸಿದ್ಧತೆ, ತರಬೇತಿ ಹಾಗೂ ಮಾರ್ಗದರ್ಶನವನ್ನು ತೆಗೆದುಕೊಂಡಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ
ವಾಗುತ್ತದೆ’ ಎಂದು ತಿಳಿಸಿದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಡೊಮಿನಿಕ್ ಮಾತನಾಡಿ, ‘ಪ್ರಸ್ತುತ ಸಮಾಜದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿರುವ ಸೇವಾ ವಲಯ, ಸ್ವ ಉದ್ಯೋಗ, ತಂತ್ರಜ್ಞಾನ ಮುಕ್ತ ಆವಿಷ್ಕಾರ, ಜಾಗತಿಕ ತಂತ್ರಜ್ಞಾನ ಕ್ಷೇತ್ರಗಳತ್ತ ವಿದ್ಯಾರ್ಥಿಗಳು ತಮ್ಮ ಗಮನ ಹರಿಸಬೇಕು. ಆ ಮೂಲಕ ತಮ್ಮ ಬದುಕನ್ನು ರೂಪಿಸಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶಿಸ್ತು ಮತ್ತು ನೈತಿಕತೆ ಅತಿಮುಖ್ಯ.
ಇದರ ಜೊತೆಗೆ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ತಾನು ಹುಟ್ಟಿ ಬೆಳೆದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು. ಆಗ ಮಾತ್ರ ನಮ್ಮ ಯಶಸ್ಸು ಮತ್ತು ಸಾಧನೆಗೆ ನಿಜವಾದ ಅರ್ಥ ಬರುತ್ತದೆ’ ಎಂದರು.
ಕೇಂದ್ರದ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.