ಕನಕಪುರ: ‘ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟಿರುವ ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ’ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಂದ್ರ ತಿಳಿಸಿದರು.
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಿಂದ ಶಾರದ ಶಾಲಾ ಆವರಣದಲ್ಲಿ ಬುಧವಾರ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಜಯಂತಿಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿ ಸಮಾನ ಅವಕಾಶ ಕಲ್ಪಿಸದಿದ್ದರೆ ಮುಂದುವರಿದ ಜನಾಂಗ ಮುಂದುವರಿಯುತ್ತಲೇ ಇರುತಿತ್ತು. ಹಿಂದುಳಿದ ಮತ್ತು ಶೋಷಿತ ಸಮುದಾಯಗಳು ಕೆಳಸ್ತರದಲ್ಲೇ ಇರುತ್ತಿದ್ದವು. ಆಗ ಈ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ಜಾತಿ, ಧರ್ಮದವರು ಇಲ್ಲಿ ಒಟ್ಟಿಗೆ ಕುಳಿತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ಕೊಡುಗೆಯೇ ಕಾರಣ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ. ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್ ಒಂದು ಜಾತಿಗೆ ಸೀಮಿತರಲ್ಲ. ದೇಶದಲ್ಲಿನ ಎಲ್ಲಾ ಜಾತಿ, ಧರ್ಮ, ಜನಾಂಗಗಳಿಗೂ ಸಂವಿಧಾನದ ಮೂಲಕ ಸಮಾನತೆ ಕಲ್ಪಿಸಿದ್ದಾರೆ ಎಂದರು.
ಅಂಬೇಡ್ಕರ್ ಅವರನ್ನು ಕೆಲವು ಪಟ್ಟಭದ್ರಶಕ್ತಿಗಳು ತಮ್ಮ ಬಿಗಿಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ. ಒಂದು ಜಾತಿಗೆ ಸೀಮಿತಗೊಳಿಸಲು ಹೊರಟಿದ್ದಾರೆ. ಅವರು ಎಲ್ಲಾ ಜಾತಿಗಳಿಗೂ ಸಲ್ಲುವ ಮತ್ತು ಒಪ್ಪುವ ವ್ಯಕ್ತಿ. ಸಂವಿಧಾನದ ಮೂಲಕ ಎಲ್ಲಾ ಜಾತಿ, ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜದಲ್ಲಿ ಸಮಾನತೆ ಮೂಡಿಸಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಂ. ಮಾದೇಶ್ ಮಾತನಾಡಿ, ಸಮಾಜದಲ್ಲಿ ಅನಿಷ್ಟ ಆಚರಣೆಗಳನ್ನು ದೂರ ಮಾಡಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ. ಅವರ ಜಯಂತಿಯನ್ನು ಎಲ್ಲಾ ಜಾತಿಯ ಜನರು ಸೇರಿ ಒಟ್ಟಾಗಿ ಆಚರಣೆ ಮಾಡಬೇಕು. ಅಂತಹ ಪ್ರಯತ್ನವನ್ನು ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಮಾಡಿದೆ ಎಂದು ಶ್ಲಾಘಿಸಿದರು.
ಪಂಚಾಯಿತಿ ವ್ಯಾಪ್ತಿಯ 11 ಅಂಗವಿಕಲರಿಗೆ ಸೋಲಾರ್ ಕಿಟ್ ಮತ್ತು 11 ಕಡು ಬಡವರಿಗೆ ಬಟ್ಟೆ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ್, ಉಪಾಧ್ಯಕ್ಷ ಷಣ್ಮುಖ, ಮಾಜಿ ಅಧ್ಯಕ್ಷರಾದ ಚಿಂದಾರಿಗೌಡ, ರಮೇಶ್, ದುಂಡುಮಾದಯ್ಯ, ವೆಂಕಟ ರಾಮೇಗೌಡ, ಕೆ.ಟಿ. ಶ್ರೀನಿವಾಸ್, ಸದಸ್ಯರಾದ ಶಿವರಾಮಜು ಮಲ್ಲೇಶ್, ಪ್ರಕಾಶ್, ಶಿವರಾಜು, ಚಿಕ್ಕಮ್ಮ, ಹಲಗೇಗೌಡ, ಪಾರ್ವತಮ್ಮ, ಹಸ್ರಪ್ ಹುನ್ನೀಷ, ಚಿಕ್ಕಸ್ವಾಮಿ, ಹುಲಿಮಾದಯ್ಯ, ಮುಖ್ಯಶಿಕ್ಷಕ ಪ್ರಭಾಕರ್
ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.