ಚನ್ನಪಟ್ಟಣ: ಉಕ್ರೇನ್ನಲ್ಲಿ ಆ. 11ರಿಂದ ನಡೆಯಲಿರುವ 23 ವರ್ಷದೊಳಗಿನ ಮಿನಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಪಟ್ಟಣದ ಯುವ ಪ್ರತಿಭೆ ಸೈಯದ್ ಶಕೀಬ್ ಅವರನ್ನು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪಟ್ಟಣದಲ್ಲಿ ಭಾನುವಾರ ಆತ್ಮೀಯವಾಗಿ ಅಭಿನಂದಿಲಾಯಿತು.
ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ 7 ಮಂದಿ ಫುಟ್ಬಾಲ್ ಆಟಗಾರರ ಪೈಕಿ ಸೈಯದ್ ಶಕೀಬ್ ಒಬ್ಬರಾಗಿದ್ದು, ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ತೋರಿ, ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಹೊರಹೊಮ್ಮಿ ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಲಾಯಿತು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಬಣ್ಣದ ಆಟಿಕೆಗಳಿಗೆ ವಿಶ್ವವಿಖ್ಯಾತಿ ಹೊಂದಿರುವ ಚನ್ನಪಟ್ಟಣ ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಪಟ್ಟಣದಲ್ಲಿ ಯುವ ಪ್ರತಿಭೆಗಳಿಗೆ ಅಭ್ಯಾಸ, ತರಬೇತಿಗಾಗಿ ಸುಸಜ್ಜಿತ ಕ್ರೀಡಾಂಗಣವಿಲ್ಲ ಎಂದು ವಿಷಾದಿಸಿದರು.
ತಾಲ್ಲೂಕಿನ ಕ್ರೀಡಾಪಟುಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದುಆಗ್ರಹಿಸಿದರು.
ಸೂಕ್ತ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ, ಕ್ರೀಡಾಪಟುಗಳಿಗೆ ಬೇಕಾದ ಸಲಕರಣೆಗಳ ಕೊರತೆಯ ನಡುವೆಯೂ ಫುಟ್ಬಾಲ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಿನಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಸೈಯದ್ ಶಕೀಬ್ ಆಯ್ಕೆಯಾಗಿರುವುದು ಪ್ರಶಂಸನೀಯ. ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ತೋರಿ ಚನ್ನಪಟ್ಟಣಕ್ಕೆ ಕೀರ್ತಿ ತರಲಿ ಎಂದರು.
ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್, ಡಾ.ಕೃಷ್ಣಮೂರ್ತಿ, ನಗರಸಭೆ ನಿವೃತ್ತ ಪೌರಾಯುಕ್ತ ರಾಮಚಂದ್ರು, ಸಮಾಜ ಸೇವಕ ಇಕ್ಬಾಲ್ ಬೇಗ್, ಮುಖಂಡ ಬಾವಸಾ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್ ಗೌಡ, ಗಾಯಕ ಚೌ.ಪು. ಸ್ವಾಮಿ, ಹೋರಾಟಗಾರ ಬಾಬ್ ಜಾನ್ ಹಾಜರಿದ್ದರು.