ಚನ್ನಪಟ್ಟಣ: ಬೆಂಗಳೂರು– ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಕಂಟೇನರ್ ಲಾರಿಯೊಂದು ಪಕ್ಕದ ರಸ್ತೆ ದಾಟಿಕೊಂಡು ಸರ್ವೀಸ್ ರಸ್ತೆಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಪಟ್ಟಣದ ಹೊರವಲಯದ ಸಂಕಲಗೆರೆ ಗೇಟ್ ಬಳಿ ಬುಧವಾರ ಘಟನೆ ನಡೆದಿದೆ.
ಮೈಸೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಂಟೇನರ್, ಚಾಲಕನ ನಿಯಂತ್ರಣವನ್ನು ಕಳೆದುಕೊಂಡಿದೆ. ಏಕಾಏಕಿ ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ಬಂದ ಕಂಟೇನರ್, ಬೇಲಿಯನ್ನು ನುಗ್ಗಿಕೊಂಡು ಸರ್ವೀಸ್ ರಸ್ತೆಗೆ ಬಂದು ನಿಂತಿದೆ ಎಂದು ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
ಎರಡೂ ರಸ್ತೆಗಳಲ್ಲಿ ಯಾವುದೇ ವಾಹನಗಳು ಹಾಗೂ ಜನ ಇಲ್ಲದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ಕುರಿತು ಕಂಟೇನರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಘಟನೆಯು ಸರ್ವೀಸ್ ರಸ್ತೆ ಸಮೀಪದ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ