ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಅಸಂಘಟಿತರಿಗೂ ಅಪಘಾತ ಪರಿಹಾರ ಭಾಗ್ಯ

ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾದ ಕಾರ್ಮಿಕರಿಗೆ ಪಿಎಂಎಸ್‌ಬಿವೈ ಅಡಿ ಸೌಲಭ್ಯ
Published 10 ಅಕ್ಟೋಬರ್ 2023, 5:50 IST
Last Updated 10 ಅಕ್ಟೋಬರ್ 2023, 5:50 IST
ಅಕ್ಷರ ಗಾತ್ರ

ರಾಮನಗರ: ವಿವಿಧ ರೀತಿಯ ಕೌಶಲ ಕೆಲಸಗಳನ್ನು ಮಾಡುತ್ತಾ ಚದುರಿ ಹೋಗಿರುವ ಅಸಂಘಟಿತ ಕಾರ್ಮಿಕರನ್ನು ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿರುವ ಕಾರ್ಮಿಕರ ಇಲಾಖೆ, ಇದೀಗ ಅವರಿಗೆ ಅಪಘಾತ ಪರಿಹಾರ ನೀಡಲು ಮುಂದಾಗಿದೆ. ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗವಿಕಲರಾದರೆ ಪರಿಹಾರ ಸಿಗಲಿದೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ (ಪಿಎಂಎಸ್‌ಬಿವೈ) ಕಾರ್ಮಿಕರಿಗೆ ಈ ಪರಿಹಾರ ಸಿಗಲಿದೆ. ಇ–ಶ್ರಮ ಪೋರ್ಟಲ್‌ನಲ್ಲಿ 2021 ಆಗಸ್ಟ್ 28ರಿಂದ 2022ರ ಮಾರ್ಚ್ 31ರೊಳಗೆ ನೋಂದಣಿ ಮಾಡಿಕೊಂಡಿರುವ ಕಾರ್ಮಿಕರು, ಈ ಯೋಜನೆಯಡಿ ಪರಿಹಾರಕ್ಕೆ ಅರ್ಹರಾಗಿದ್ದಾರೆ.

₹1 ಲಕ್ಷದಿಂದ ₹2 ಲಕ್ಷ ಪರಿಹಾರ: ‘ಅಪಘಾತದಲ್ಲಿ ಮರಣ ಹೊಂದಿದ ಕಾರ್ಮಿಕನ ಕುಟುಂಬದವರಿಗೆ ₹2 ಲಕ್ಷ ಪರಿಹಾರ ಸಿಗಲಿದೆ. ಅಲ್ಲದೆ ಶಾಶ್ವತ ಅಂಗವಿಕಲತೆ ಹೊಂದಿದರೆ ಉದಾಹರಣೆಗೆ ಶಾಶ್ವತವಾಗಿ ದೃಷ್ಟಿ ಅಥವಾ ಕೈ–ಕಾಲು ಕಳೆದುಕೊಂಡ ಕಾರ್ಮಿಕರು ಸಹ ₹2 ಲಕ್ಷ ಪರಿಹಾರಕ್ಕೆ ಅರ್ಹರಾಗಿರುತ್ತಾರೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಲದಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾಗಶಃ ಅಂಗವಿಕಲರಾದರೆ ₹1 ಲಕ್ಷ ಪರಿಹಾರ ಸಿಗಲಿದೆ. ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಂಡಿರುವ 59 ವರ್ಷದೊಳಗಿನ ಕಾರ್ಮಿಕರ ಪೈಕಿ, ಈಗಾಗಲೇ ಯಾರಾದರು ಅಪಘಾತದಲ್ಲಿ ಮೃತಪಟ್ಟಿದ್ದರೆ ಅವರ ಕುಟುಂಬದವರು ಅಥವಾ ಶಾಶ್ವತ ಅಂಗವಿಕಲರಾಗಿರುವರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು’ ಎಂದು ಹೇಳಿದರು.

379 ಬಗೆಯ ಕಾರ್ಮಿಕರು ಅರ್ಹ: ‘ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ‍ಪರಿಹಾರ ಯೋಜನೆಗೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತರು, ಮನೆಗೆಲಸ ಮಾಡುವವರು, ವಾಹನ ಚಾಲಕರು, ಟೈಲರ್‌ಗಳು ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸುವ 379 ಬಗೆಯ ಅಸಂಘಟಿತ ಕಾರ್ಮಿಕರು ಅರ್ಹರಾಗಿದ್ದಾರೆ’ ಎಂದರು.

‘ದೇಶದಾದ್ಯಂತ ಇರುವ ಅಸಂಘಟಿತ ಕಾರ್ಮಿಕರ ಸಮಗ್ರ ದತ್ತಾಂಶ ಕ್ರೋಢಿಕರಿಸಿ, ಅವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಇ–ಶ್ರಮ್ ಪೋರ್ಟಲ್‌ನಲ್ಲಿ ಕಾರ್ಮಿಕರ ನೋಂದಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ನೋಂದಣಿಯಾಗಿರುವವರ ದತ್ತಾಂಶದ ಆಧಾರದ ಮೇಲೆ ಸರ್ಕಾರ ಅಸಂಘಟಿತರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಅದರಲ್ಲಿ ಈ ಅಪಘಾತ ಪರಿಹಾರವೂ ಒಂದಾಗಿದೆ’ ಎಂದು ಮಾಹಿತಿ ನೀಡಿದರು.

‘ಆದಾಯ ತೆರಿಗೆ ಪಾವತಿದಾರರು, ಭವಿಷ್ಯ ನಿಧಿ ಹಾಗೂ ಇಎಸ್‌ಐ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಯಾರಾದರೂ ಸುಳ್ಳು ಮಾಹಿತಿ ನೀಡಿ ಪರಿಹಾರ ಪಡೆದರೆ ಅಥವಾ ಪಡೆಯಲು ಯತ್ನಿಸಿದರೆ, ಅಂತಹವರ ವಿರುದ್ಧ ಇಲಾಖೆಯು ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

ಪರಿಹಾರಕ್ಕೆ ಬೇಕಾದ ದಾಖಲೆಗಳೇನು?

ಅಪಘಾತದಲ್ಲಿ ಮರಣ ಹೊಂದಿದ ಕಾರ್ಮಿಕನ ಆಧಾರ್ ಕಾರ್ಡ್ ಇ–ಶ್ರಮ್ ಕಾರ್ಡ್ ಮರಣ ಪ್ರಮಾಣಪತ್ರ ಮರಣ ಕಾರಣದ ವೈದ್ಯಕೀಯ ಪ್ರಮಾಣಪತ್ರ ಪೊಲೀಸ್ ಎಫ್‌ಐಆರ್ ಮರಣೋತ್ತರ ಪರೀಕ್ಷೆ ವರದಿಯೊಂದಿಗೆ ಮೃತರ ಕುಟುಂಬದವರು ತಾಲ್ಲೂಕು ಮಟ್ಟದ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅಥವಾ ಜಿಲ್ಲಾ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಶಾಶ್ವತ ಅಥವಾ ಭಾಗಶಃ ಅಂಗವಿಕಲರಾಗಿದ್ದರೆ ಆಧಾರ್ ಕಾರ್ಡ್ ಇ–ಶ್ರಮ್ ಕಾರ್ಡ್ ಜೊತೆಗೆ ಅಪಘಾತದಲ್ಲಿ ಸಂಭವಿಸಿದ ಅಂಗವಿಕಲತೆ ಸೂಚಿಸುವ ಆಸ್ಪತ್ರೆಯ ದಾಖಲೆಯನ್ನು ಅರ್ಜಿಯೊಂದಿಗೆ ಒದಗಿಸಬೇಕು.

ಅಸಂಘಟಿತ ಕಾರ್ಮಿಕರ ಬದುಕಿಗೆ ಆಧಾರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಅಪಘಾತ ಪರಿಹಾರ ಸೌಲಭ್ಯ ಜಾರಿಗೆ ತಂದಿದೆ. ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು
– ಸುಭಾಷ್ ಎಂ. ಆಲದಕಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT