ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನಿಗದಿ ಇನ್ನಷ್ಟು ವಿಳಂಬ?

ಕನಕಪುರ, ಮಾಗಡಿ ನಗರ ಸ್ಥಳೀಯ ಸಂಸ್ಥೆಗಳ ಹೊಸ ಸದಸ್ಯರಲ್ಲಿ ತಳಮಳ
Last Updated 25 ನವೆಂಬರ್ 2019, 19:31 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಕನಕಪುರ ನಗರಸಭೆ ಹಾಗೂ ಮಾಗಡಿ ಪುರಸಭೆಯ ಚುನಾವಣೆ ಮುಗಿದು ವಾರಗಳೇ ಕಳೆದರೂ ಸದಸ್ಯರಿಗೆ ಇನ್ನೂ ಅಧಿಕಾರ ಭಾಗ್ಯ ದೊರೆತಿಲ್ಲ. ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗೆ ಸರ್ಕಾರ ಮೀಸಲಾತಿ ನಿಗದಿ ಮಾಡಲು ಇನ್ನಷ್ಟು ಸಮಯ ಹಿಡಿಯಲಿದ್ದು, ಸದ್ಯಕ್ಕೆ ಎರಡೂ ಕಡೆ ಅಧಿಕಾರಿಗಳ ದರ್ಬಾರು ಮುಂದುವರಿಯಲಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಗೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ಇದರಲ್ಲಿ ಕೆಲವು ಪ್ರಕರಣಗಳು ಇತ್ಯರ್ಥಗೊಳ್ಳುತ್ತಿದ್ದು, ಎಲ್ಲವನ್ನೂ ಬಗೆಹರಿಸಿ ಹೊಸತಾಗಿ ಮೀಸಲಾತಿ ಪ್ರಕಟಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎನ್ನಲಾಗಿದೆ. ಇದನ್ನು ಆಧರಿಸಿ ಸರ್ಕಾರ ಇನ್ನಷ್ಟೇ ಮೀಸಲಾತಿ ಗೊತ್ತು ಮಾಡಬೇಕಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿಯಲು ತಿಂಗಳ ಸಮಯವೇ ಬೇಕಾಗಬಹುದು ಎನ್ನಲಾಗುತ್ತಿದೆ.

ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬಿಡದಿ ಪುರಸಭೆಯಲ್ಲಿ ಮಾತ್ರ ಸದಸ್ಯರು ಅಧಿಕಾರ ಚಲಾಯಿಸುತ್ತಿದ್ದಾರೆ. ಉಳಿದ ನಾಲ್ಕು ಸಂಸ್ಥೆಗಳ ಪೈಕಿ ಎರಡರಲ್ಲಿ ಇದೇ ತಿಂಗಳ 11ರಂದು ಚುನಾವಣೆ ನಡೆದಿದ್ದು, 14ರಂದು ಫಲಿತಾಂಶವೂ ಪ್ರಕಟಗೊಂಡಿತ್ತು. ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್‌ –ಜೆಡಿಎಸ್ ಮೈತ್ರಿಕೂಟ 31 ವಾರ್ಡುಗಳ ಪೈಕಿ 30ರಲ್ಲಿ ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವುದು ಸ್ಪಷ್ಟವಾಗಿದೆ. ಮಾಗಡಿ ಪುರಸಭೆಯ 23 ವಾರ್ಡುಗಳ ಪೈಕಿ ಜೆಡಿಎಸ್‌ 12, ಕಾಂಗ್ರೆಸ್ 10 ಹಾಗೂ ಬಿಜೆಪಿ 1 ಸ್ಥಾನ ಪಡೆದಿದ್ದು, ಅಧಿಕಾರ ಹಿಡಿಯುವ ಕಸರತ್ತು ನಡೆದೇ ಇದೆ. ಅದಕ್ಕೆ ಪೂರಕವಾಗಿ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಯ ಮೀಸಲಾತಿಗಾಗಿ ಸದಸ್ಯರು ಕಾಯತೊಡಗಿದ್ದಾರೆ.

ಮೀಸಲಾತಿಗೂ ಲಾಬಿ: ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳಿಗೆ ಜಾತಿ/ವರ್ಗವಾರು ಮೀಸಲಾತಿ ನಿಗದಿಗಾಗಿ ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸುವುದು ಗುಟ್ಟಾಗಿ ಏನು ಉಳಿದಿಲ್ಲ. ಆದರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದು, ಇಲ್ಲಿ ಉಭಯ ಸಂಸ್ಥೆಗಳಲ್ಲೂ ತಲಾ ಒಂದು ಸ್ಥಾನ ಮಾತ್ರ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಗದಿ ಬಗ್ಗೆ ಆಡಳಿತ ಪಕ್ಷಕ್ಕೆ ಆತುರ ಇದ್ದಂತೆ ಇಲ್ಲ.

ಕನಕಪುರಕ್ಕೆ ಸೋಮವಾರ ಶಾಸಕ ಡಿ.ಕೆ. ಶಿವಕುಮಾರ್ ಭೇಟಿ ಕೊಟ್ಟು ನಗರಸಭೆಯ ನೂತನ ಸದಸ್ಯರನ್ನು ಅಭಿನಂದಿಸಿದ್ದು, ಸದಸ್ಯರಲ್ಲಿ ಹೊಸ ವಿಶ್ವಾಸ ತುಂಬಿದ್ದಾರೆ. ಇದೇ ಸಂದರ್ಭ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಕೋರಿ ಹಲವರು ಮನವಿಯನ್ನೂ ಮಾಡಿಕೊಂಡಿದ್ದಾರೆ.

ಇತ್ತ ಮಾಗಡಿ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್‌ ಜೊತೆ ಕಾಂಗ್ರೆಸ್‌ ಸಹ ಪೈಪೋಟಿ ನಡೆಸಿದೆ. ಮೀಸಲಾತಿ ಪ್ರಕಟಗೊಂಡ ಬಳಿಕವಷ್ಟೇ ಸಂಖ್ಯಾ ಬಲದ ಲೆಕ್ಕಾಚಾರ ನಡೆಯಲಿದೆ. ಉಭಯ ಪಕ್ಷಗಳೂ ಅದಕ್ಕಾಗಿ ಎದುರು ನೋಡುತ್ತಿವೆ.

ಬಿಡದಿಗೂ ಇಲ್ಲ ಅಧಿಕಾರ ಭಾಗ್ಯ

ಮೀಸಲಾತಿಯಲ್ಲಿನ ಬಿಕ್ಕಟ್ಟಿನಿಂದಾಗಿ ಬಿಡದಿ ಪುರಸಭೆಯಲ್ಲಿಯೂ ಅಧ್ಯಕ್ಷ–ಉಪಾಧ್ಯಕ್ಷರು ಇಲ್ಲದಂತೆ ಆಗಿದೆ.ಕಳೆದ ಎಂಟು ತಿಂಗಳ ಹಿಂದೆ ಅಧ್ಯಕ್ಷ–ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದು, ಹೊಸಬರ ಆಯ್ಕೆಗೆ ಮೀಸಲು ಪ್ರಕಟಗೊಳ್ಳಬೇಕು. ಆದರೆ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದನ್ನು ಮುಂದಿಟ್ಟುಕೊಂಡು ಸರ್ಕಾರವು ಮೀಸಲಾತಿ ನಿಗದಿ ಮಾಡಿಲ್ಲ. ಹೀಗಾಗಿ ಇಲ್ಲಿಯೂ ಸದ್ಯ ಅಧಿಕಾರಿಗಳದ್ದೇ ಆಡಳಿತ ನಡೆದಿದೆ.

ಮೀಸಲಾತಿ ಪ್ರಕಟಣೆ ಸರ್ಕಾರಕ್ಕೆ ಬಿಟ್ಟದ್ದು

ಮೀಸಲಾತಿ ಸಂಬಂಧ ಈಚೆಗೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರ ಯಾವಾಗ ಮೀಸಲಾತಿ ನಿಗದಿ ಮಾಡಿ ಪ್ರಕಟಣೆ ಹೊರಡಿಸುತ್ತದೆಯೋ ಕಾದು ನೋಡಬೇಕು ಎಂದು ಶಾಸಕ ಎ.ಮಂಜುನಾಥ್‌ ಹೇಳುತ್ತಾರೆ.

ಸೂಚನೆ ಬಂದಿಲ್ಲ

ಸರ್ಕಾರದಿಂದ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಯಾವಾಗ ಬರುತ್ತದೆಯೋ ಗೊತ್ತಿಲ್ಲ ಎಂದು ಕನಕಪುರ ತಹಶೀಲ್ದಾರ್ಆನಂದಯ್ಯ ಹೇಳುತ್ತಾರೆ.

8 ತಿಂಗಳಿಂದ ಅಧಿಕಾರಿಗಳ ಆಡಳಿತ

ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳ ಆಡಳಿತಾವಧಿಯು ಕಳೆದ ಮಾರ್ಚ್‌ಗೆ ಅಂತ್ಯಗೊಂಡಿದೆ. ಜಿಲ್ಲೆಯ ಉಳಿದೆರಡು ಸಂಸ್ಥೆಗಳಿಗೆ ಚುನಾವಣೆ ನಡೆದಾಗ್ಯೂ ಇಲ್ಲಿ ಚುನಾವಣಾ ಆಯೋಗವು ಚುನಾವಣೆಗೆ ಮನಸ್ಸು ಮಾಡಿಲ್ಲ. ಹೀಗಾಗಿ ಕಳೆದ ಎಂಟು ತಿಂಗಳಿನಿಂದ ಇಲ್ಲಿ ಅಧಿಕಾರಿಗಳ ಆಡಳಿತವೇ ನಡೆದಿದೆ. ಹೊಸ ಜನಪ್ರತಿನಿಧಿಗಳ ಆಯ್ಕೆಗೆ ಆಯೋಗ ಹಾಗೂ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಯಾವಾಗ ಚುನಾವಣೆ ಘೋಷಣೆ ಆಗಲಿದೆಯೋ ಎಂದು ನಗರಸಭೆಯ ಮಾಜಿ ಸದಸ್ಯರು, ಸದಸ್ಯರಾಗುವ ಕನಸಿನಲ್ಲಿ ಇರುವವರೂ ಜಾತಕ ಪಕ್ಷಿಗಳಂತೆ ಕಾಯತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT