ರಾಮನಗರ: ಸದ್ಯ ನಡೆದಿರುವ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಿಂದೆ ಸರಿಸಿ ಕಾಂಗ್ರೆಸ್ಗೆ ಬೆಂಬಲ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಜೆಡಿಎಸ್ ಬೆಂಬಲಿಸುವಂತೆ ಎಚ್.ಡಿ. ಕುಮಾರಸ್ವಾಮಿ ಮನವಿ ಕುರಿತು ಮಾಗಡಿಯಲ್ಲಿ ಬುಧವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಜೆಡಿಎಸ್ನವರ ಜೊತೆ ಮಾತನಾಡಿ ಮನವಿ ಮಾಡಿದ್ದಾರೆ. ಹಿಂದೆ ನಾವು ಬೆಂಬಲ ನೀಡಿದ್ದೆವು. ಹೀಗಾಗಿ ಈ ಬಾರಿ ಅವರೇ ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ಮತ ನೀಡಲಿ’ ಎಂದರು.
ರಾಜ್ಯದಾದ್ಯಂತ ರಸಗೊಬ್ಬರದ ಕೊರತೆ ಇದ್ದು, ಕಳೆದ ಕೆಲವು ವರ್ಷಗಳಲ್ಲಿ ಇದರ ಬೆಲೆ ಶೇ 50–60 ರಷ್ಟು ಏರಿಕೆ ಆಗಿದೆ. ಸಬ್ಸಿಡಿ ಹಣ ರೈತರನ್ನು ತಲುಪುತ್ತಿಲ್ಲ. ರಸಗೊಬ್ಬರದ ಅಕ್ರಮ ಮಾರಾಟ ಸಹ ಹೆಚ್ಚಿದೆ. ಪರಿಸ್ಥಿತಿ ಅರಿಯಲು ರಾಜ್ಯದಾದ್ಯಂತ ಪ್ರವಾಸ ಮಾಡಲಾಗುವುದು ಎಂದರು.
ಹಾಲಿನ ಬೆಲೆ ಹೆಚ್ಚಿಸಿ: ಈಗ ಹಾಲು–ನೀರಿನ ಬೆಲೆಗೂ ಹೆಚ್ಚು ವ್ಯತ್ಯಾಸ ಇಲ್ಲದಂತೆ ಆಗಿದೆ. ರೈತರ ಸಲುವಾಗಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹4–5 ದರ ಹೆಚ್ಚಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.