ರಾಮನಗರ: ಹಲವು ಅಡ್ಡಿ ಆತಂಕಗಳ ನಡುವೆಯೂ ಮೇಕೆದಾಟು ಪಾದಯಾತ್ರೆಯು ಭಾನುವಾರ ಆರಂಭಗೊಂಡಿದ್ದು, ಕಾಂಗ್ರೆಸ್ಸಿಗರು ಉತ್ಸಾಹದಿಂದ ಹೆಜ್ಜೆ ಹಾಕಿದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಾದಯಾತ್ರೆಗೆ ಹಸಿರು ನಿಶಾನೆ ತೋರಿದರು. ವೇದಿಕೆ ಕಾರ್ಯಕ್ರಮದ ಬಳಿಕ ಬೆಳಿಗ್ಗೆ 11.30ಕ್ಕೆ ನಡಿಗೆ ಆರಂಭಗೊಂಡಿತು. ಕಾಂಗ್ರೆಸ್ ನಾಯಕರು ಒಟ್ಟಾಗಿ ತೆರಳದೇ ಹಲವು ತಂಡಗಳ ಮೂಲಕ ಒಬ್ಬೊಬ್ಬರಾಗಿ ಹೆಜ್ಜೆ ಹಾಕಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕ ತಂಡಗಳಲ್ಲಿ ಮುನ್ನಡೆದರು.
ಆರಂಭದಲ್ಲಿ ಉತ್ಸಾಹದಿಂದಲೇ ಹೆಜ್ಜೆ ಹಾಕಿದ ಪಾದಯಾತ್ರಿಕರು ನಂತರದಲ್ಲಿ ಏರುಮುಖವಾದ ಹಾದಿ, ನೆತ್ತಿ ಸುಡುವ ಬಿಸಿಲಿನ ಕಾರಣಕ್ಕೆ ಬಳಲಿದ್ದು ಕಂಡುಬಂದಿತು. ಅಲ್ಲಲ್ಲಿ ಪಾನೀಯ, ನೀರು ಕುಡಿಯುತ್ತಲೇ ನೀರಿಗಾಗಿ ನಡಿಗೆ ಮುಂದುವರಿಯಿತು.