ಬಿಡದಿ: ‘ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ಒಬ್ಬ 420ವ್ಯಕ್ತಿಯಾಗಿದ್ದಾರೆ’ ಎಂದು ಸಂಸದ ಡಿ.ಕೆ. ಸುರೇಶ್ ಟೀಕಿಸಿದರು.
ಬಿಡದಿಯಲ್ಲಿ ಶನಿವಾರ ಮೀನು ಕೃಷಿ ದಿನಾಚರಣೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯೋಗೇಶ್ವರ್ ಅವರನ್ನು ಜನರೇ 420 ಅಂತ ಕರೆಯುತ್ತಾರೆ. ಆ 420 ಮಾತಿಗೆ ನಾನೇನು ಹೇಳಲಿ’ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿಗೆ ಎಲ್ಲಿಂದಲೋ ಬಂದವರು ಹಾಗೂ ಜೈಲಿಗೆ ಹೋಗಿ ಬಂದವರನ್ನು ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಯೋಗೇಶ್ವರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ಅಂತಹವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಾಗಿಲ್ಲ’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರು ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ಲ. ಇದನ್ನೇ ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.
‘ಬೇರೆಯವರ ಹೆಗಲ ಮೇಲೆ ಕೈಹಾಕಿದರೆ ಸಂಬಂಧ ಇದೆ ಎನ್ನುತ್ತಾರೆ. ಯಾರೊಬ್ಬರೂ ಬಂದು ಹೆಗಲ ಮೇಲೆ ಕೈ ಹಾಕುವಾಗ ಏನು ಮಾಡಬೇಕೆಂದು ನೀವೇ ಹೇಳಬೇಕು. ಸಾರ್ವಜನಿಕ ಜೀವನದಲ್ಲಿ ಕೆಲವೊಂದು ಘಟನೆಗಳು ಘಟಿಸುತ್ತವೆ. ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.