ರಾಮನಗರ: ಮ್ಯಾನ್ಹೋಲ್ಗೆ ಇಳಿದು ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಸಮತಾ ಸೈನಿಕ ದಳದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸಂಘಟನೆಯ ವಿದ್ಯಾರ್ಥಿ ರಾಜ್ಯ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಮೂರು ಮಂದಿ ಪೌರ ಕಾರ್ಮಿಕರ ಸಾವಿಗೆ ಕಾರಣಕರ್ತರಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು. 2013ರ ಕಾಯ್ದೆ ಪ್ರಕಾರ ರಾಜ್ಯದಲ್ಲಿ ಮ್ಯಾನ್ಹೋಲ್ಗೆ ಕಾರ್ಮಿಕರನ್ನು ಇಳಿಸುವುದನ್ನು ರದ್ದು ಮಾಡಲಾಗಿದೆ. 2019ರಲ್ಲಿ ಬೆಂಗಳೂರಿನ ಯಲಹಂಕದಲ್ಲಿ ಇಬ್ಬರು ಪೌರಕಾರ್ಮಿಕರು ಮ್ಯಾನ್ಹೋಲ್ನಲ್ಲಿ ಇಳಿದು ಸಾವನ್ನಪ್ಪಿದಾಗ ಸರಕಾರ ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಿತ್ತು ಎಂದರು.
ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪಿಂಚಣಿ, ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಕುಮಾರಸ್ವಾಮಿ, ಮರಳವಾಡಿ ಮಂಜು, ಕಾಳರಾಜು, ಶ್ಯಾಮ, ಪುನೀತ್, ಸತೀಶ್, ಚಂದ್ರಶೇಖರ್, ನಿಖಿಲ್ ಕೆಬಿಎಸ್ ಕುಮಾರ್ ಇದ್ದರು.