ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಮಳೆ ಕೊರತೆ, ಅತ್ಯಧಿಕ ತಾಪಮಾನ: ಮಾವು ಇಳುವರಿ ನಿರೀಕ್ಷೆ ಕೇವಲ ಶೇ 10

ತೋಟಗಾರಿಕೆ ಇಲಾಖೆ ಸಮೀಕ್ಷೆ ವರದಿ
Published 7 ಮೇ 2024, 5:35 IST
Last Updated 7 ಮೇ 2024, 5:35 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಎರಡನೇ ಜಿಲ್ಲೆಯಾದ ರಾಮನಗರದಲ್ಲಿ ಈ ಸಲ ಮಾವು ಇಳುವರಿ ಕೇವಲ ಶೇ 10–12. ಮಳೆ ಕೊರತೆ ಹಾಗೂ ಅತ್ಯಧಿಕ ತಾಪಮಾನದಿಂದಾಗಿ ಮಾವು ನೆಲ ಕಚ್ಚಿರುವ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿರುವ ಮಾವು ಇಳುವರಿಯ ಅಂದಾಜು ವರದಿಯು, ತೀವ್ರ ಬರ ಎದುರಿಸುತ್ತಿರುವ ಜಿಲ್ಲೆಯ ಸ್ಥಿತಿಗೆ ಕನ್ನಡಿ ಹಿಡಿದಿದೆ.

ಜಿಲ್ಲೆಯಲ್ಲಿ ಸುಮಾರು 30,067 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಸುಮಾರು 28 ಸಾವಿರ ಬೆಳೆಗಾರರು ಮಾವು ಬೆಳೆಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 2.35 ಲಕ್ಷ ಮೆಟ್ರಿಕ್ ಟನ್‌ನಿಂದ 2.53 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಈ ಸಲ ಬರದಿಂದಾಗಿ ಮಾವು ಇಳುವರಿಯ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಜಂಟಿ ಸಮೀಕ್ಷೆ: ‘ನೀರಿನ ಕೊರತೆಯಿಂದಾಗಿ ಮಾವು ಬೆಳೆ ನಷ್ಟವಾಗಿರುವುದರ ಕುರಿತು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಾಲ್ಲೂಕುಗಳ ಮಟ್ಟದಲ್ಲಿ ಜಂಟಿ ಸಮೀಕ್ಷೆ ತಂಡಗಳನ್ನು ರಚಿಸಿ ಏಪ್ರಿಲ್ ತಿಂಗಳಲ್ಲಿ ಸಮಿಕ್ಷೆ ನಡೆಸಲಾಗಿತ್ತು. ತಂಡದ ಸದಸ್ಯರು ಆಯ್ದ ಮಾವು ಬೆಳೆಯುವ ಜಾಗಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದರು. ಅದನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಶೇ 90–95ರಷ್ಟು ಮಾವು ಮಳೆಯಾಶ್ರಿತವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ, ಜೀವನೋಪಾಯಕ್ಕಾಗಿ ಮಾವು ಅವಲಂಬಿಸಿರುವ ಬೆಳೆಗಾರರಿಗೆ ಪ್ರಕೃತಿ ವಿಕೋಪದಡಿ ಬೆಳೆ ಹಾನಿಯಾಗಿರುವುದನ್ನು ಪರಿಗಣಿಸಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಒದಗಿಸುವಂತೆ ಕೋರಲಾಗಿದೆ’ ಎಂದು ಹೇಳಿದರು.

ರೋಗಬಾಧೆ ಮತ್ತು ಅತಿಯಾದ ತಾಪಮಾನದಿಂದಾಗಿ ರಾಮನಗರ ತಾಲ್ಲೂಕಿನಲ್ಲಿ ಒಣಗಿರುವ ಮಾವಿನ ಮರ
ರೋಗಬಾಧೆ ಮತ್ತು ಅತಿಯಾದ ತಾಪಮಾನದಿಂದಾಗಿ ರಾಮನಗರ ತಾಲ್ಲೂಕಿನಲ್ಲಿ ಒಣಗಿರುವ ಮಾವಿನ ಮರ
ಇಳುವರಿ ಕುಸಿತಕ್ಕೆ ಕಾರಣವೇನು?
ವಾಡಿಕೆಯಂತೆ ಸುರಿದ ಮಳೆ– ಮಾರ್ಚ್–ಏಪ್ರಿಲ್‌ನಲ್ಲಿ ಹೆಚ್ಚಿದ ತಾಪಮಾನ– ಕಾಯಿಗಳಿಗೆ ಜೋನಿ ಹುಳುವಿನ ಬಾಧೆ– ಅವಧಿಪೂರ್ವದಲ್ಲೇ ಉದುರಿದ ಹೂವು, ಕಾಯಿ ಅಂಕಿಅಂಶ... 30,067 ಹೆಕ್ಟೇರ್ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ2.35 ಲಕ್ಷ ಮೆಟ್ರಿಕ್ ಟನ್‌ ವಾರ್ಷಿಕ ಮಾವಿನ ಇಳುವರಿ28 ಸಾವಿರಜಿಲ್ಲೆಯಲ್ಲಿರುವ ಮಾವು ಬೆಳೆಗಾರರುಶೇ 95ಜಿಲ್ಲೆಯಲ್ಲಿ ಮಳೆಯಾಶ್ರಿತ ಮಾವು ಪ್ರದೇಶ
ಜಿಲ್ಲೆಯಲ್ಲಿ ಮಾವು ಬೆಳೆಯು ನೆಲ ಕಚ್ಚಿರುವ ಕುರಿತು ನಡೆಸಿರುವ ಸಮೀಕ್ಷೆಯ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ
– ರಾಜು ಎಂ.ಎಸ್ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ
ತಾಲ್ಲೂಕುವಾರು ಸಮೀಕ್ಷೆ ವಿವರ
* ಚನ್ನಪಟ್ಟಣಸಮೀಕ್ಷೆ ತಂಡವು ತಾಲ್ಲೂಕಿನ 9 ತಾಕುಗಳಿಗೆ ಭೇಟಿ ನೀಡಿತ್ತು. ತಾಪಮಾನವು 36–38 ಡಿಗ್ರಿ ಸೆಲ್ಸಿಯಸ್ ಇದ್ದಿದ್ದರಿಂದ ಹೂವು ಹಾಗೂ ಕಾಯಿಗಳು ಉದುರಿರುವುದು ಮಳೆ ಕೊರತೆಯಿಂದಾಗಿ ಎಲ್ಲಾ ತಳಿಗಳ ಮಾವಿನ ಗಾತ್ರ ತಗ್ಗಿರುವುದು ಹಣ್ಣುಗಳು ರಸವತ್ತತೆ ಕಡಿಮೆಯಾಗಿರುವುದು ಬಿಸಿಲಿಗೆ ಕೆಲ ಮರಗಳು ಒಣಗಿರುವುದು ಜೋನಿ ಮತ್ತು ನುಸಿ ಹುಳು ಬಾಧೆ ಮರಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಬಾದಾಮಿ ಮಾವಿನಲ್ಲಿ ಸ್ಪಾಂಜಿ ಟಿಶ್ಯೂ ಎಂಬ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹಣ್ಣುಗಳ ಗುಣಮಟ್ಟ ತಗ್ಗಿರುವುದನ್ನು ತಂಡ ಗಮನಿಸಿದೆ. ತಾಲ್ಲೂಕಿನಲ್ಲಿ ಶೇ 8–12ರಷ್ಟು ಮಾತ್ರ ಇಳುವರಿ ಸಿಗಬಹುದು ಎಂದು ಅಂದಾಜಿಸಿದೆ. * ಮಾಗಡಿಶೇ 95ರಷ್ಟು ರೈತರು ತಾಲ್ಲೂಕಿನಲ್ಲಿ ಮಳೆಯಾಶ್ರಯದಿಂದಲೇ ಮಾವು ಬೆಳೆಯುತ್ತಾರೆ. ಸಮೀಕ್ಷೆ ತಂಡ ಇಲ್ಲಿನ 12 ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂಗಾರು ಮಳೆ ಕೊರತೆಯಿಂದ ತೇವಾಂಶ ಕೊರತೆ ಉಂಟಾಗಿ ಹೂವು ಉದುರಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಅತ್ಯಧಿಕ ತಾಪಮಾನವು ಕಾಯಿಗಳು ನಿಂಬೆ ಗಾತ್ರದಲ್ಲಿರುವಾಗಲೇ ಉದುರಲು ಕಾರಣವಾಗಿದೆ. ಕೆಲ ಕಾಯಿಗಳು ಬಿಸಿಲ ಝಳಕ್ಕೆ ಸುಟ್ಟಂತಾಗಿ ಕಂದು ಬಣ್ಣಕ್ಕೆ ತಿರುಗಿವೆ. ಮಣ್ಣಿನ ತೇವಾಂಶ ಕೊರತೆಯಿಂದ ಹಣ್ಣಿನ ಗಾತ್ರ ಕಡಿಮೆಯಾಗಿ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಈ ಎಲ್ಲಾ ಕಾರಣದಿಂದಾಗಿ ತಾಲ್ಲೂಕಿನಲ್ಲಿ ಶೇ 10–12ರಷ್ಟು ಮಾತ್ರ ಇಳುವರಿ ಸಿಗಬಹುದು ಎಂದು ಅಂದಾಜಿಸಿದೆ. * ಕನಕಪುರತಾಲ್ಲೂಕಿನಲ್ಲಿ ಶೇ 92ರಷ್ಟು ಮಾವು ಬೆಳೆಗಾರರಿಗೆ ಮಳೆ ನೆಚ್ಚಿಕೊಂಡಿರುವುದು ಸಮೀಕ್ಷೆ ತಂಡವು ಭೇಟಿ ನೀಡಿದಾಗ ಕಂಡುಬಂತು. ಇಲ್ಲಿನ ಸುಮಾರು 12 ತಾಕುಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಳೆ ಕೊರತೆಯಿಂದ ತೇವಾಂಶ ಕೊರತೆ ಉಂಟಾಗಿ ಹೂವಿನ ಜೊತೆಗೆ ಕಾಯಿಗಳು ಸಹ ಉದುರಿವೆ. ಅತ್ಯಧಿಕ ತಾಪಮಾನವು ಕಾಯಿಗಳ ಗಾತ್ರದಲ್ಲಿ ಕಡಿಮೆಯಾಲು ಕಾರಣವಾಗಿದೆ. ಕೆಲ ಕಾಯಿಗಳು ಬಿಸಿಲ ಝಳಕ್ಕೆ ಸುಟ್ಟಂತಾಗಿ ಕಂದು ಬಣ್ಣಕ್ಕೆ ತಿರುಗಿವೆ. ಜಿಗಿ ಹುಳುವಿನ ಬಾಧೆಯು ಕಾಯಿಗಳ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದ್ದು ಮರಗಳು ಅಲ್ಲಲ್ಲಿ ಒಣಗುತ್ತಿರುವುದು ತಂಡದ ಗಮನಕ್ಕೆ ಬಂದಿದೆ. ತಾಲ್ಲೂಕಿನಲ್ಲಿ ಶೇ 8–10ರಷ್ಟು ಇಳುವರಿ ಮಾತ್ರ ನಿರೀಕ್ಷಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. * ರಾಮನಗರಸಮೀಕ್ಷೆ ತಂಡವು ತಾಲ್ಲೂಕಿನ 9 ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶೇ 92ರಷ್ಟು ಮಾವು ಮಳೆಯಾಶ್ರಿತವಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ತಾಪಮಾನವು 36–38 ಡಿಗ್ರಿ ಸೆಲ್ಸಿಯಸ್ ತಲುಪಿದ್ದರಿಂದ ಹೂವು ಹಾಗೂ ಕಾಯಿಗಳು ಉದುರಿವೆ. ನೀರಿನ ಕೊರತೆಯಿಂದಾಗಿ ಎಲ್ಲಾ ತಳಿಗಳ ಮಾವಿನ ಗಾತ್ರ ತಗ್ಗಿದ್ದು ಹಣ್ಣುಗಳ ರಸವತ್ತತೆ ಕಡಿಮೆಯಾಗಿದೆ. ಬಿಸಿಲಿಗೆ ಅಲ್ಲಲ್ಲಿ ಮರಗಳು ಒಣಗಿವೆ. ಕಾಯಿ ಬಿಟ್ಟರೂ ಹಳದಿ ಬಣ್ಣಕ್ಕೆ ತಿರುಗಿವೆ. ಬಾದಾಮಿ ಮಾವಿನಲ್ಲಿ ಸ್ಪಾಂಜಿ ಟಿಶ್ಯೂ ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ ಶೇ 10–15ರಷ್ಟು ಮಾತ್ರ ಇಳುವರಿ ಸಿಗಬಹುದು ಎಂದು ತಂಡ ಅಂದಾಜಿಸಿದೆ.
‘ಬೆಳೆಗಾರರ ಉಳಿವಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ’
‘ಮಾವು ಬೆಳೆ ನೆಚ್ಚಿಕೊಂಡಿರುವವರಿಗೆ ತೀವ್ರ ಬರಗಾಲ ಹಾಗೂ ಅತಿಯಾದ ತಾಪಮಾನದಿಂದಾಗಿ ಬೆಳೆ ಕೈ ಸೇರಿಲ್ಲ. ಒಂದು ಕಡೆ ಮಾವಿನ ಇಳುವರಿ ಪಾತಾಳಕ್ಕೆ ಕುಸಿದಿದ್ದರೆ ಮತ್ತೊಂದೆಡೆ ಒಣಗುತ್ತಿರುವ ಮಾವಿನ ಮರಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಬೆಳೆಗಾರರು ಉಳಿಯಬೇಕಾದರೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು’ ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ನಿರ್ದೇಶಕರೂ ಆಗಿರುವ ರೈತ ಮುಖಂಡ ಸಿ. ಪುಟ್ಟಸ್ವಾಮಿ ಒತ್ತಾಯಿಸಿದರು. ‘ಅತಿಯಾದ ತಾಪಮಾನವು ಬೆಳೆ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಕುರಿತು ವೈಜ್ಞಾನಿಕ ವಿಶ್ಲೇಷಣೆಗೆ ತೋಟಗಾರಿಕೆ ವಿಶ್ವವಿದ್ಯಾನಿಲಯ ತೋಟಗಾರಿಕೆ ತಜ್ಞರು ಹಾಗೂ ವಿಜ್ಞಾನಿಗಳ ನೇತೃತ್ವದಲ್ಲಿ ಪ್ರದೇಶವಾರು ಆಯ್ಕೆ ಮಾಡಿ ಸಮಗ್ರ ಅಧ್ಯಯನ ನಡೆಸಬೇಕು. ಒಣಗುತ್ತಿರುವ ಮಾವಿನ ಮರಗಳ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT