ಜಮೀನು ಒತ್ತುವರಿ ಆರೋಪ ಎದುರಿಸುತ್ತಿರುವ ಬಿಡದಿಯ ಈ ರೆಸಾರ್ಟ್ಗೆ ಮಂಗಳವಾರ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿದ ಸಂದರ್ಭ ಅವರು ಪತ್ರಕರ್ತರ ಜತೆ ಮಾತನಾಡಿದರು. 'ರೆಸಾರ್ಟ್ ವ್ಯಾಪ್ತಿ ಒಟ್ಟು 508 ಎಕರೆ ಇದ್ದು, ಖಾಸಗಿ ಜಮೀನಿನ ಜೊತೆಗೆ ಸರ್ಕಾರಿ ಜಾಗವೂ ಒತ್ತುವರಿ ಆಗಿರುವುದು ಸ್ಪಷ್ಟವಾಗಿದೆ. ಇದರಲ್ಲಿ ರೆಸಾರ್ಟ್ನವರು ಸರ್ಕಾರಕ್ಕೆ 28 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ಒತ್ತುವರಿಯಾದ 77 ಎಕರೆಗೆ ದಂಡ ಮೊತ್ತ ನಿಗದಿಗೆ ಸುಪ್ರಿಂ ಕೋರ್ಟ್ ಆದೇಶಿಸಿತ್ತು. ಪ್ರತಿಯಾಗಿ ₹980 ಕೋಟಿ ಪಾವತಿಸುವಂತೆ ಸರ್ಕಾರ ನಿಗದಿಪಡಿಸಿತ್ತು. ಆದರೆ, ದಂಡದ ಪ್ರಮಾಣ ಹೆಚ್ಚಾಗಿದೆ ಎಂದು ರೆಸಾರ್ಟ್ನವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 13 ತಿಂಗಳುಗಳಿಂದ ಅದರ ವಿಚಾರಣೆ ನಿಗದಿಯಾಗಿಲ್ಲ’ ಎಂದರು.