ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಾವತಿ ನೀರಿಗೆ ಹೋರಾಟ: ಮಾಗಡಿ ರೈತರ ಸಿದ್ಧತೆ

Published 22 ಮೇ 2024, 5:13 IST
Last Updated 22 ಮೇ 2024, 5:13 IST
ಅಕ್ಷರ ಗಾತ್ರ

ಕುದೂರು: ಹೇಮಾವತಿ ನೀರಿನ ಹೋರಾಟಕ್ಕೆ ಮಾಗಡಿ ತಾಲ್ಲೂಕಿನಲ್ಲಿಯೂ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಹಸಿರು ಸೇನೆ ರೈತ ಬಣದ ಜಿಲ್ಲಾಧ್ಯಕ್ಷ ಬೈರೇಗೌಡ ತಿಳಿಸಿದರು.

ತಾಳೆಕೆರೆ ಹ್ಯಾಂಡ್ ಪೋಸ್ಟ್ ಹಸಿರು ಸೇನೆ ರೈತ ಕಚೇರಿಯಲ್ಲಿ ಸೋಮವಾರ ತಿಪ್ಪಸಂದ್ರ, ಕುದೂರು, ಸೋಲೂರು ಹೋಬಳಿಗಳ ರೈತ ಮುಖಂಡರ ಸಭೆಯಲ್ಲಿ ಹೇಮಾವತಿ ಹೋರಾಟದ ಸೂಚನೆ ನೀಡಿದರು.

‘ತುಮಕೂರು ಜಿಲ್ಲೆಯಲ್ಲಿ ರೈತರು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ. ಮಠಾಧೀಶರನ್ನು ಕರೆತಂದು ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಮಾಗಡಿ ತಾಲ್ಲೂಕಿನಲ್ಲಿಯೂ ಕುಡಿಯುವ ನೀರಿಗಾಗಿ ನ್ಯಾಯ ಕೇಳಲು ಹೋರಾಟದ ಹಾದಿ ತುಳಿಯುವ ಅನಿವಾರ್ಯತೆ ಇದೆ. ಹೀಗಾಗಿ ತಾಲ್ಲೂಕಿನ ಎಲ್ಲಾ ರೈತರನ್ನು ದಿನಾಂಕ ನಿಗದಿ ಮಾಡಿ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ’ ಎಂದರು.

ಮಾಗಡಿ ತಾಲ್ಲೂಕಿನ ಹಸಿರು ಸೇನೆ ರೈತ ಬಣದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ‘ಹೇಮಾವತಿ ಮಾಗಡಿ ತಾಲ್ಲೂಕಿಗೆ ಬರುವ ಹೆಬ್ಬಾಗಿಲು ತಾಳೇಕೆರೆ ಹ್ಯಾಂಡ್ ಪೋಸ್ಟ್ ಭಾಗ. ಹೀಗಾಗಿ ತಾಳೇಕೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಕುಣಿಗಲ್ ತಾಲ್ಲೂಕಿನಲ್ಲಿ 20 ವರ್ಷಗಳ ಹಿಂದೆ ಮಾಜಿ ಶಾಸಕ ವೈ.ಕೆ. ರಾಮಯ್ಯ ರೂಪಿಸಿದ ಪ್ರತಿಭಟನೆ ಮಾದರಿಯಲ್ಲಿಯೇ ರಾಷ್ಟೀಯ ಹೆದ್ದಾರಿ ಬಳಿಯಲ್ಲಿ ಟೆಂಟ್ ನಿರ್ಮಿಸಿ ರೈತರು ಧರಣಿ ಕೂರಲು ತೀರ್ಮಾನ ಮಾಡಿದ್ದೇವೆ’ ಎಂದು ತಿಳಿಸಿದರು.

‘ಕರಪತ್ರ ಹಂಚಿ ಮಾಗಡಿ ತಾಲ್ಲೂಕಿಗೆ ನ್ಯಾಯ ಬೇಕಾಗಿದೆ ಎಂದು ಸರ್ಕಾರವನ್ನು ಆಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ನೈತಿಕ ಹೋರಾಟಕ್ಕೆ ಸರ್ವ ಪಕ್ಷಗಳ ನಾಯಕರು ಮತ್ತು ಮಠಾಧೀಶರನ್ನು ಬೆಂಬಲ ಹೇಳಿ ಅವರನ್ನು ಹೋರಾಟಕ್ಕೆ ಕರೆತರಲು ನಾಳೆಯಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ನೇರಳೆಕೆರೆ ರೈತ ಹೋರಾಟಗಾರ ಶ್ರೀನಿವಾಸ್ ಮಾತನಾಡಿ, ‘ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಕೊಡಲು ತುಮಕೂರಿಗರು ಆಕ್ಷೇಪಿಸಿರುವುದು ಸರಿಯಲ್ಲ. ಅಕ್ಕ ಪಕ್ಕದ ಜಿಲ್ಲೆಯ ರೈತರ ಹಿತವನ್ನು ಕಾಯಲು ಜಲಸಂಪನ್ಮೂಲ ಇಲಾಖೆ ಮತ್ತು ಸರ್ಕಾರ ಸಂಧಾನ ಸೂತ್ರವನ್ನು ಮಾಡಿ ಕಾಮಗಾರಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ಬಗಿನೆಗೆರೆ ರಂಗಸ್ವಾಮಿ, ನಾರಾಯಣಪುರ ಶಿವಣ್ಣ, ರಿಜ್ವಾನ್, ಮಾಯನಾಯಕನಹಳ್ಳಿ ಮಾರೇಗೌಡ, ಮಾಗಡಿಯ ಕುಮಾರ್, ನಾಗಣ್ಣ, ಬಗಿನಿಗೆರೆ ಸುರೇಶ್, ತಿಮ್ಮಪ್ಪ, ಬೆಟ್ಟೇಗೌಡ, ಮರೂರು ಕೃಷ್ಣಪ್ಪ, ನೇರಳೆ ಕೆರೆ ಶ್ರೀನಿವಾಸ್, ಜಯರಾಮು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT