ನೆರೆಯ ಮೈಸೂರು, ಚಾಮರಾಜನಗರ, ಮಂಡ್ಯ ಮೊದಲಾದ ಜಿಲ್ಲೆಗಳ ಕೆಲವು ರೈತರು ಸೋಮವಾರ ರಾತ್ರಿಯೇ ತಮ್ಮ ಟ್ರ್ಯಾಕ್ಟರ್ ಹಾಗೂ ಖಾಸಗಿ ವಾಹನಗಳ ಮೂಲಕ ರಾಮನಗರದತ್ತ ಧಾವಿಸಿದ್ದರು. ಹೀಗೆ ಬಂದವರಿಗೆ ಚನ್ನಪಟ್ಟಣದ ಬೈರಾಪಟ್ಟಣ ಸರ್ಕಾರಿ ಶಾಲೆ ಆವರಣದಲ್ಲಿ ರೈತ ಸಂಘಟನೆಗಳ ಮುಖಂಡರು ಊಟ ಹಾಗೂ ವಸತಿಯ ವ್ಯವಸ್ಥೆ ಮಾಡಿದ್ದರು. ಮುಂಜಾನೆ ಇವರೊಟ್ಟಿಗೆ ನೆರೆಯ ಜಿಲ್ಲೆಗಳಿಂದ ಇನ್ನಷ್ಟು ರೈತರು ಒಗ್ಗೂಡಿದರು. ಎಲ್ಲರೂ ಒಟ್ಟಾಗಿ ಬೆಂಗಳೂರಿನತ್ತ ಹೆಜ್ಜೆ ಇಟ್ಟರು. ರೈತರ ಕೊರಳಲ್ಲಿ, ಟ್ರ್ಯಾಕ್ಟರ್ಗಳ ಮೇಲೆ ಹಸಿರು ಶಾಲುಗಳು ರಾರಾಜಿಸುತ್ತಿದ್ದವು. ಕೆಲವು ವಾಹನಗಳಿಗೆ ರಾಷ್ಟ್ರಧ್ವಜಗಳನ್ನು ಕಟ್ಟಲಾಗಿತ್ತು.