ಚನ್ನಪಟ್ಟಣ: ತಾಲ್ಲೂಕಿನ ಬೇವೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ನಗರದ ಚಂದ್ರು ಡಯಗ್ನೋಸ್ಟಿಕ್ ಸೆಂಟರ್ ವತಿಯಿಂದ ಬೇವೂರು ಗ್ರಾಮದ ಎಂಪಿಸಿಎಸ್ ಆವರಣದಲ್ಲಿ ಶುಕ್ರವಾರ ಮಧುಮೇಹ, ರಕ್ತದೊತ್ತಡ ಉಚಿತ ತಪಾಸಣೆ ಹಾಗೂ ಔಷಧಿ ವಿತರಣೆ ಶಿಬಿರ ನಡೆಯಿತು.
ಚಾಲನೆ ನೀಡಿ ಮಾತನಾಡಿದ ಎಂಪಿಸಿಎಸ್ ಸಿಇಒ ರಾಮಯ್ಯ, ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಾಮಾನ್ಯ ಎಂಬಂತಾಗಿದೆ. ಮನುಷ್ಯನ ಒತ್ತಡದ ಬದುಕಿನಲ್ಲಿ ಈ ಬಗ್ಗೆ ಗಮನ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಇವು ಸಾಮಾನ್ಯವಾಗಿ ಮನುಷ್ಯನನ್ನು ಕಾಡಲಾರಂಭಿಸಿವೆ ಎಂದರು.
ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ನೀಡುವುದು ಬಹಳ ಮುಖ್ಯ. ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರು ಶಿಬಿರದಲ್ಲಿ ತಪಾಸಣೆಗೆ ಒಳಗಾದರು.