ರಾಮನಗರ: ಕೆಂಗೇರಿ ರೈಲು ನಿಲ್ದಾಣದಲ್ಲಿ ಹೂ ಮಾರುತ್ತಿದ್ದ ಸಂಗೀತಾ ಎಂಬ 13 ಎಂಬ ಬಾಲಕಿಗೆ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮೂಲಕ ಮಾದರಿ ಆಗಿದ್ದಾರೆ.
ಕೆಂಗೇರಿ ಬಳಿ ಹೂ ಮಾರುತ್ತಿದ್ದ ವೇಳೆ ಈ ಹುಡುಗಿ ಶಿಕ್ಷಣ ಸಚಿವರ ಕಣ್ಣಿಗೆ ಬಿದ್ದಿದ್ದಳು. ಆಕೆಯ ವಿವರ ಪಡೆದುಕೊಂಡ ಸಚಿವರು ಶಾಲೆಗೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಆಕೆಯನ್ನು ರಾಮನಗರ ತಾಲ್ಲೂಕಿನ ಕೈಲಾಂಚದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ದಾಖಲು ಮಾಡಲಾಗಿದೆ. ಹುಡುಗಿಗೆ ಬೇಕಾದ ಬಟ್ಟೆಬರೆಯನ್ನು ಜಿಲ್ಲೆಯ ವಾರ್ತಾ ಇಲಾಖೆಯ ಅಧಿಕಾರಿ ಶಂಕರಪ್ಪ ಕೊಡಿಸಿದ್ದಾರೆ.
ಸಂಗೀತಾ ಬಡ ಕುಟುಂಬದವಳಾಗಿದ್ದು, ಆಕೆಯ ತಂದೆ –ತಾಯಿ ಅವಳನ್ನು ವರಗೆರಹಳ್ಳಿಯ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಆ ಹುಡುಗಿ ತನ್ನ ಶಾಲೆ ನಂತರ ಆಟಕ್ಕೆ ಬದಲು ಹೂ, ತರಕಾರಿ ಮಾರಾಟ ಮಾಡಿ ಅಂದಿನ ಸಂಪಾದನೆಯನ್ನು ಪೋಷಕರಿಗೆ ನೀಡಬೇಕಿತ್ತು. ಓದಲು ಅವಕಾಶವೂ ಕಡಿಮೆ ಇತ್ತು.
ಸಚಿವರ ಸೂಚನೆ ಮೇರೆಗೆ ಜಿಲ್ಲೆಯ ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಇಲಾಖೆ ಅಧಿಕಾರಿಗಳು ಆಕೆಗೆ ಕೈಲಾಂಚ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಏಳನೇ ತರಗತಿಗೆ ಪ್ರವೇಶ ಕೊಡಿಸಿದ್ದಾರೆ. ಶಾಲೆಯಲ್ಲಿ ಪ್ರವೇಶ ಸಿಕ್ಕಿದ್ದಕ್ಕೆ ಬಾಲಕಿ ಸಹ ಖುಷಿ ಆಗಿದ್ದು, ಓದಿನ ಕಡೆ ಗಮನ ನೀಡುವುದಾಗಿ ಹೇಳಿದ್ದಾಳೆ.