ರಾಮನಗರ: ‘ಮಹಿಳೆಯರು ಹಿಂದುಳಿಯಲು ಶಿಕ್ಷಣದ ಕೊರತೆಯೇ ಕಾರಣ. ಇಂದಿಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಿಂದೇಟು ಹಾಕುವ ಮನಸ್ಥಿತಿ ಸಮಾಜದಲ್ಲಿದೆ. ಈ ಮನೋಭಾವ ಹೋಗಲಾಡಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹೆಬ್ಬಾಗಿಲು ತೆರೆಯಬೇಕು’ ಎಂದು ಹಿರಿಯ ನ್ಯಾಯಾಧೀಶೆ ಅನಿತಾ ಎನ್.ಪಿ ಹೇಳಿದರು.
ನಗರದ ಭಾರತ್ ವಿಕಾಸ್ ಪರಿಷತ್ ವಾಲ್ಮೀಕಿ ಶಾಖೆಯು ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ, ಮಾಗನಹಳ್ಳಿಯ ಕೆಂಪಮ್ಮ ಮತ್ತು ಶಿವ ನಾಂಕಾರಯ್ಯ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಅವರು ಮಾತನಾಡಿದರು.
‘ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಕೀಳರಿಮೆ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂದು ತೋರಿಸಬೇಕು. ಆ ಮೂಲಕ ಸ್ತ್ರೀ–ಪುರುಷರಿಬ್ಬರೂ ಸಮಾನರು ಎಂಬ ಸಂದೇಶ ಸಾರಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಶಿ ಬಸವರಾಜು ಮಾತನಾಡಿ, ‘ಹೆಣ್ಣೊಂದು ಕಲಿತರೆ ಶಾಲೆಯನ್ನು ತೆರೆದಂತೆ ಎಂಬ ನುಡಿಯಂತೆ 12ನೇ ಶತಮಾನದಲ್ಲಿ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಸಮಾನತೆ ಕಲ್ಪಿಸಿದರು. ದೇಶವು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಅಬ್ಬಕ್ಕ ಸೇರಿದಂತೆ ಹಲವು ನಾರಿಗಳ ಪರಾಕ್ರಮ ಮತ್ತು ಸಾಧನೆಗೆ ಸಾಕ್ಷಿಯಾಗಿದೆ’ ಎಂದರು.
ನಾರಿ ಶಕ್ತಿ ಸಂಗಮದ ಅಧ್ಯಕ್ಷೆ ಸೌಮ್ಯ ಕುಮಾರಸ್ವಾಮಿ, ‘ಮಹಿಳೆಯರ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಸಂಘದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರು ತಾವು ಉದ್ಯೋಗ ಸೃಷ್ಟಿಸಿಕೊಳ್ಳುವ ಜೊತೆಗೆ, ಇತರರಿಗೂ ಉದ್ಯೋಗ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಸಂಘಟಿತರಾಗಬೇಕು’ ಎಂದು ಹೇಳಿದರು.
ರೋಟರಿ ಸಂಸ್ಥೆಯ ಕೆ.ಎಸ್. ಕಾಂತರಾಜ್, ಸರಸ್ವತಮ್ಮ, ಎಂ,ಎಸ್, ಶಂಕರಪ್ಪ, ರಾಜಣ್ಣ, ಎಚ್.ಎಸ್. ಶಿವಸ್ವಾಮಿ, ಅಂಬರೀಶ್, ಎಚ್.ವಿ. ಶೇಷಾದ್ರಿ, ಎಂ, ಜಗದೀಶ್, ಪಟೇಲ್ ರಾಜು, ಬೋರಲಿಂಗಯ್ಯ, ಲಾವಣ್ಯ ಚಂದ್ರಶೇಖರಯ್ಯ, ಕೆಂಗಲ್ ಹನುಮಂತಯ್ಯ, ವೆಂಕಟಪ್ಪ, ಪುಟ್ಟರಾಜು ಹೇಮಶ್ರೀ ಗೌಡ, ಎನ್.ವಿ. ಲೋಕೇಶ್, ವಿ. ವೆಂಕಟೇಶ್, ಬಸವಚಾರ್, ಹೊನ್ನಪ್ಪ, ಶಿಕ್ಷಕಿಯರಾದ ಗುಣಸಾಗರಿ, ಸಿದ್ದಿಲಕ್ಷ್ಮಿ ಹಾಗೂ ಇತರರು ಇದ್ದರು. ಗಾಯಕಿ ಝಾನ್ಸಿರಾಣಿ ವಂದೇ ಮಾತರಂ ಹಾಡಿದರು. ಭವ್ಯ ನಿರೂಪಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.