ಚನ್ನಪಟ್ಟಣ: ಭಾರತ ಜೋಡೊ ಯಾತ್ರೆ ಮೂಲಕ ದೇಶ ಒಗ್ಗೂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ದೇಶ ಯಾವಾಗ ಛಿದ್ರ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮಂಗಳವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗರರೊಂದಿಗೆ ಮಾತನಾಡಿದ ಅವರು, ‘ಭಾರತ ಯಾವಾಗ ಒಡೆದು ಹೋಗಿದೆ ಅನ್ನೋದು ನನಗೆ ಗೊತ್ತಿಲ್ಲ. ಛಿದ್ರ ಆಗಿದ್ದರೆ ಕಾರ್ಯಕ್ರಮದ ಮೂಲಕ ಅದನ್ನು ಕಾಂಗ್ರೆಸ್ ನವರು ಹೇಗೆ ಸರಿಪಡಿಸುತ್ತಾರೆ ಎನ್ನುವುದನ್ನು ಜನರ ಮುಂದೆ ಇಡಬೇಕು’ ಎಂದರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅದರ ವಿರುದ್ಧ ನಾವು ಹೋರಾಡಬೇಕು. ಕಾಂಗ್ರೆಸ್ ನವರು ಭಾರತ್ ಜೋಡೋ ಹಾಗೂ ಪೇಸಿಎಂ ಅಭಿಯಾನ ಮುಖಾಂತರ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದರು.
‘ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ಆದ ಅನಾಹುತದಿಂದ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಮಳೆಯಿಂದ ಆಗಿರುವ ತೊಂದರೆಗಳು, ಕೈಗಾರಿಕೆಗಳಿಗೆ ಆಗಿರುವ ತೊಂದರೆಯಿಂದ ಎಲ್ಲರೂ ಬೀದಿಗೆ ಬಿದ್ದಿದ್ದಾರೆ. ಇಂತಹ ವಿಷಯಗಳಲ್ಲಿ ಸರ್ಕಾರ ಕ್ರಮ ವಹಿಸಬೇಕು. ರೈತರು ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ರಾಜ್ಯದ ಹಲವು ಸಮಸ್ಯೆಗಳಿವೆ. ಅದರ ವಿರುದ್ಧ ಹೋರಾಡಲಾಗುವುದು’ ಎಂದು ಹೇಳಿದರು.
ನಾನಾ ಕಾಮಗಾರಿಗೆ ಚಾಲನೆ: ಚನ್ನಪಟ್ಟಣ ಬಿ.ಎಂ.ರಸ್ತೆಯಿಂದ ನ್ಯಾಯಾಲಯ ರಸ್ತೆಗೆ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ, ತಾಲ್ಲೂಕಿನ ಚಕ್ಕೆರೆ ನವೋದಯ ಶಾಲೆಯಿಂದ ಚಕ್ಕಲೂರು, ಎವಿಹಳ್ಳಿ, ಅಂಕುಶನಹಳ್ಳಿ ಕರಷ್ಣಾಪುರದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ, ಅಂಕುಶನಹಳ್ಳಿ ಎಂಪಿಸಿಎಸ್ ನೂತನ ಕಟ್ಟದ ಉದ್ಘಾಟನೆಯನ್ನು ಕುಮಾರಸ್ವಾಮಿ ನೆರವೇರಿಸಿದರು.
ಮಾಗಡಿ ಶಾಸಕ ಮಂಜುನಾಥ್, ನಗರಸಭಾ ಅಧ್ಯಕ್ಷ ಪ್ರಶಾಂತ್, ಜೆಡಿಎಸ್ ಮುಖಂಡರಾದ ಎಂ.ಸಿ.ಕರಿಯಪ್ಪ, ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಮು, ಹಾಪ್ ಕಾಮ್ಸ್ ದೇವರಾಜು, ರೇಖಾ ಉಮಾಶಂಕರ್, ಸತೀಶ್ ಬಾಬು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.