ರಾಮನಗರ: ಕನ್ನಡಪರ ಸಂಘಟನೆಗಳು ಇದೇ 5ರಂದು ಕರೆ ನೀಡಿರುವ ಕರ್ನಾಟಕ ಬಂದ್ನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಬೆಂಬಲಿಸಲಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದರು.
‘ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ ನಾಡದ್ರೋಹ ಕೆಲಸ ಮಾಡಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸುವ ಜೊತೆಗೆ ಕನ್ನಡಪರ ಹೋರಾಟಗಾರರ ಕುರಿತು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ರೇಣುಕಾಚಾರ್ಯ, ಅರವಿಂದ ಬೆಲ್ಲದ್ ಸೇರಿದಂತೆ ಅನೇಕರು ಗೇಲಿ ಮಾಡಿರುವುದನ್ನು ಪ್ರತಿಯೊಬ್ಬ ಕನ್ನಡಿಗನೂ ಖಂಡಿಸಬೇಕಾಗಿದೆ. ಹೀಗಾಗಿ ಬಂದ್ ಬೆಂಬಲಿಸಲು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸೂಚನೆ ನೀಡಿದ್ದಾರೆ. ಶನಿವಾರದ ಬಂದ್ನಲ್ಲಿ ಭಾಗವಹಿಸುತ್ತೇವೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಸತ್ಯನಾರಾಯಣ ಮಾತನಾಡಿ, ಬಂದ್ ದಿನ ಕರವೇ ಕಾರ್ಯಕರ್ತರು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗುತ್ತೇವೆ ಎಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಜಿಲ್ಲಾ ರೈತ ಘಟಕದ ಅಧ್ಯಕ್ಷ ಶಂಭುಗೌಡ, ಪದಾಧಿಕಾರಿಗಳಾದ ಹೊ.ಪು.ಸಾಗರ್, ದೇವರಾಜು, ಅಭಿಲಾಷ್, ನಿಖಿಲ್ ಇದ್ದರು.